ಎಲ್ಲ ಕ್ಷೇತ್ರಗಳಲ್ಲಿಯೂ ತಂತ್ರಜ್ಞಾನ ಮುಂದುವರೆಯುತ್ತಿದೆ. ಕಳ್ಳರು, ಕೊಲೆಗಡುಕರು, ಹ್ಯಾಕರ್ಗಳು ತಮ್ಮ ಅಪರಾಧಗಳಿಲ್ಲಿಯೂ ತಂತ್ರಜ್ಞಾನವನ್ನು ಬಳಸಿಕೊಳ್ಳಲಾರಂಭಿಸಿದ್ದಾರೆ. ಅದೇ ರೀತಿ ಅವರನ್ನು ಬಂಧಿಸಬೇಕಾದ ಮತ್ತು ನಿಯಂತ್ರಿಸಬೇಕಾದ ಪೊಲೀಸರೂ ‘ಅಪ್ಡೇಟ್’ ಆಗಲೇಬೇಕಾದ ಅನಿವಾರ್ಯತೆ ಇದೆ. ಪೊಲೀಸ್ ಇಲಾಖೆಯೂ ಹೊಸ ಆ್ಯಪ್ಗಳನ್ನು ಅಭಿವೃದ್ಧಿಪಡಿಸಿ ಬಳಸಲಾರಂಭಿಸಿದೆ. ಅವುಗಳಲ್ಲಿ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (M-CCTNS) ಆ್ಯಪ್ ಕೂಡ ಒಂದು. ಕರ್ನಾಟಕದಲ್ಲಿ ಈ ಆ್ಯಪ್ ಬಳಸಿ, ಮೊದಲ ಬಾರಿಗೆ ಪ್ರಕರಣವೊಂದನ್ನು ಪೊಲೀಸರು ಬೇಧಿಸಿದ್ದಾರೆ.
ಮಾರ್ಚ್ 23 ರಂದು ದಾವಣಗೆರೆಯ ‘ರಿಂಗ್ ರೋಡ್’ನಲ್ಲಿ ಮೈ ಮೇಲೆ ಖಾರದ ಪುಡಿ ಹಾಕಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿತ್ತು. ಮೃತ ವ್ಯಕ್ತಿ ಯಾರೆಂದು ಪತ್ತೆ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದರಾದರೂ, ವ್ಯಕ್ತಿಯ ಗುರುತು ಮಾತ್ರ ಪತ್ತೆಯಾಗಿರಲಿಲ್ಲ. ಆಗ ಅವರಿಗೆ ಈ ಆ್ಯಪ್ ನೆರವಾಯಿತು. ಆ್ಯಪ್ ಸಹಾಯದಲ್ಲಿ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ದಾವಣಗೆರೆಯ ವಿದ್ಯಾನಗರ ಪೊಲೀಸರು ಕೊಲೆಯಾದ ವ್ಯಕ್ತಿಯ ಬೆರಳಚ್ಚನ್ನು ‘ಸ್ಕಾನ್’ ಮಾಡಿ ಆ್ಯಪ್ಗೆ ಅಪ್ಲೋಡ್ ಮಾಡಿದ್ದಾರೆ. ಕೂಡಲೇ, ಆ ವ್ಯಕ್ತಿಯ ಹೆಸರು ಮತ್ತು ವಿಳಾಸ ತೆರೆದುಕೊಂಡಿದೆ. ಹತ್ಯೆಯಾದ ವ್ಯಕ್ತಿ, ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಮಹಾಂತೇಶ್ ಎಂಬುದನ್ನು ಪೊಲೀಸರು ಆ್ಯಪ್ ಮೂಲಕ ಕಂಡುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಹಾಸನ | ರಂಜಾನ್ ಉಪವಾಸದ ವೇಳೆ ಮೀಸಲಾತಿ ತೆಗೆದಿರುವುದೇ ಸರ್ಕಾರವನ್ನು ಕೆಳಗಿಳಿಸಲಿದೆ: ಎಚ್ ಡಿ ರೇವಣ್ಣ
ಪ್ರಕರಣದ ಬೆನ್ನತ್ತಿದ ಪೊಲೀಸರು ಆತನ ಪತ್ನಿ ಸೌಮ್ಯ ಹಾಗೂ ಅವಳ ಪ್ರಿಯಕರ ಚಂದ್ರಶೇಖರ್ನನ್ನು ವಿಚಾರಣೆ ಒಳಪಡಿಸಿದ್ದಾರೆ. ಈ ಇಬ್ಬರೂ ಸೇರಿ, ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ, ಆತನಿಗೆ ಕುಡಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ರೆಕಾರ್ಡ್ನಲ್ಲಿ ಯಾವುದೇ ವ್ಯಕ್ತಿಯ ಹೆಸರು ಮತ್ತು ವಿಳಾಸ ನಮೂದಾಗಿದ್ದರೆ ಮಾತ್ರವೇ ಈ ಆ್ಯಪ್ನಲ್ಲಿ ಅವರ ಗುರುತನ್ನು ಪತ್ತೆ ಹಚ್ಚಬಹುದು ಎನ್ನಲಾಗಿದೆ. ಈ ಆ್ಯಪ್ಅನ್ನು ರಾತ್ರಿ ಗಸ್ತಿನ ಸಮಯದಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ಪರಿಶೀಲಿಸಲು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಇದೇ ಮೊದಲ ಬಾರಿಗೆ, ರಾಜ್ಯದಲ್ಲಿ ಈ ಆ್ಯಪ್ ಬಳಸಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.