- ಸುದ್ದಿಗೋಷ್ಠಿಯಲ್ಲಿ ಮೀಸಲಾತಿಯ ಮೋಸ ಬಿಚ್ಚಿಟ್ಟ ಡಿ ಕೆ ಶಿವಕುಮಾರ್
- ʼಸೋಲಿನ ಭೀತಿಯಿಂದ ಬಿಜೆಪಿ ದ್ರೋಹ ಮಾಡುವ ರಣನೀತಿ ರೂಪಿಸಿದೆʼ
“75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮಿಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಾವಣೆ ಮಾಡಿರಲಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ ಎಲ್ಲರನ್ನು ವಂಚಿಸಿ, ಎಲ್ಲರನ್ನು ಒಡೆದು, ಎಲ್ಲ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆಶಿವಕುಮಾರ್ ಕಿಡಿ ಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಯಲ್ಲಿ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಡಗು ಸೋಲಿನ ಸುಳಿಗೆ ಸಿಲುಕಲಿರುವುದನ್ನು ಅರಿತ ಬಿಜೆಪಿ ಸರ್ಕಾರ ಈಗ ರಾಜ್ಯದ ಬಹುತೇಕ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ದ್ರೋಹ ಮಾಡುವ ರಣನೀತಿ ರೂಪಿಸಿದೆ” ಎಂದು ಹರಿಹಾಯ್ದರು.
“ಮೀಸಲಾತಿ ಬೇಡಿಕೆ ವಿಚಾರವಾಗಿ ಕೂಗು ಹೆಚ್ಚಾಗಿ ಜನರು ಈ ಸರ್ಕಾರದ ಲೂಟಿ, ಹಗರಣಗಳನ್ನು ಮರೆಸುವಂತೆ ಮಾಡುತ್ತದೆ. ಆ ಮೂಲಕ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಕಳಂಕದಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿರುವ ಈ BJP ಪಕ್ಷ ಈಗ ‘BETRAYAL JANATA PARTY’ ಅಂದರೆ ದ್ರೋಹ ಬಗೆಯುವ ಜನತಾ ಪಕ್ಷವಾಗಿದೆ” ಎಂದು ಟೀಕಿಸಿದರು.
ಮೀಸಲಾತಿ ಏರಿಕೆ ನಿರ್ಧಾರ ಹೈಕೋರ್ಟ್ನಲ್ಲಿ
“ಡಿಸೆಂಬರ್ 26, 2022ರಂದು ಬೊಮ್ಮಾಯಿ ಸರ್ಕಾರ ಬಲವಂತವಾಗಿ ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಏರಿಸಿ ಕಾನೂನು ಜಾರಿಗೊಳಿಸಿತು. ಇದರೊಂದಿಗೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ವಿಸ್ತರಣೆಯಾಯಿತು. ಈ ಕಾನೂನು ಮಾನ್ಯತೆ ಪಡೆಯಬೇಕಾದರೆ ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು. ಅಥವಾ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಬೇಕು. ಇದ್ಯಾವುದನ್ನು ಬಿಜೆಪಿ ಸರ್ಕಾರ ಮಾಡಿಲ್ಲ. ಮತ್ತೊಂದೆಡೆ ಈ ಮೀಸಲಾತಿ ಏರಿಕೆಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ” ಎಂದರು.
“ಡಿಸೆಂಬರ್ 29, 2022ರಂದು ಇದೇ ಬೊಮ್ಮಾಯಿ ಸರ್ಕಾರ ಮತ್ತೊಮ್ಮೆ ಮೀಸಲಾತಿ ವರ್ಗೀಕರಣ ಬದಲಿಸಿ, 3A ವರ್ಗದಲ್ಲಿದ್ದ ಒಕ್ಕಲಿಗರು ಹಾಗೂ ಇತರ ಸಮುದಾಯಗಳನ್ನು 2C ಎಂಬ ಹೊಸ ವರ್ಗೀಕರಣಕ್ಕೆ ಸೇರಿಸಿ, 3B ವರ್ಗೀಕರಣದಲ್ಲಿದ್ದ ಲಿಂಗಾಯತರು ಹಾಗೂ ಇತರ ಸಮುದಾಯಗಳನ್ನು 2D ಎಂಬ ಹೊಸ ವರ್ಗೀಕರಣಕ್ಕೆ ಸೇರಿಸಿತ್ತು. ಸರ್ಕಾರದ ಈ ಮೀಸಲಾತಿ ಮರುವರ್ಗೀಕರಣವನ್ನೂ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ” ಎಂದರು.
ಮೀಸಲಾತಿ ತೀರ್ಮಾನ ರದ್ದು ಮಾಡಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೇವೆ
“ಈ ಸರ್ಕಾರಕ್ಕೆ ದಲಿತರು, ಅಲ್ಪಸಂಖ್ಯಾತರನ್ನು ಕಂಡರೆ ಇಷ್ಟೋಂದು ತಿರಸ್ಕಾರ ಯಾಕೆ? ಅವರು ಮನುಷ್ಯರಲ್ಲವೇ? ಲಿಂಗಾಯತ, ಒಕ್ಕಲಿಗರಲ್ಲಿ ಯಾರಾದರೂ ಅಲ್ಪಸಂಖ್ಯಾತ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಕೇಳಿದ್ದರೇ? ಈಗಿರುವ ಶೇ.56ರಷ್ಟು ಮೀಸಲಾತಿಯ ಜತೆಗೆ ಮೀಸಲಾತಿ ಮಿತಿಯನ್ನು ವಿಸ್ತರಣೆ ಮಾಡಿ ಈ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ನೀಡಬೇಕಿತ್ತು. ಆದರೆ, ಬಿಜೆಪಿಯವರು ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿ ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತದೆ. ಮುಂದಿನ 40 ದಿನಗಳ ನಂತರ ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ನಿಮ್ಮ ಈ ಮೀಸಲಾತಿ ತೀರ್ಮಾನ ರದ್ದು ಮಾಡಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೇವೆ” ಎಂದರು.
“ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಮಾರ್ಚ್ 24ರಂದು ನಡೆದ ಬಿಜೆಪಿ ಸರ್ಕಾರ ಕೊನೆಯ ಸಚಿವ ಸಂಪುಟದಲ್ಲಿ ಮಗದೊಮ್ಮೆ ಮೀಸಲಾತಿ ವರ್ಗೀಕರಣ ಬದಲಿಸಿದೆ. ಆಮೂಲಕ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಕ್ಕೆ ಮುಂದಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ಪಂಚಮಸಾಲಿ ಲಂಗಾಯತ ಸಮುದಾಯಕ್ಕೆ ಬೊಮ್ಮಾಯಿ ಸರ್ಕಾರ ಕೇವಲ ಶೇ.2ರಷ್ಟು ಮೀಲಸಾತಿ ಏರಿಕೆ ಮಾಡಿದೆ. ಒಕ್ಕಲಿಗ ಸಮುದಾಯಕ್ಕೂ ಈ ಸರ್ಕಾರ ಕೊಟ್ಟಿದ್ದು ಕೇವಲ ಶೇ.2ರಷ್ಟು ಮೀಸಲಾತಿ ಮಾತ್ರ. ಇನ್ನು ದಶಕಗಳಷ್ಟು ಹಳೆಯದಾದ ಮುಸಲ್ಮಾನರ ಶೇ.4ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ಕಸಿಯಲಾಗಿದೆ. ಇದರಿಂದ ಅಲ್ಪಸಖ್ಯಾತ ಸಮುದಾಯಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗಿದೆ” ಎಂದು ದೂರಿದರು.
“ಮಾರ್ಚ್ 14, 2023ರಂದು ಮೋದಿ ಸರ್ಕಾರ ಸಂಸತ್ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಗಳ ಮೀಸಲಾತಿ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಬಿಜೆಪಿ ಮಾಡಿರುವ ಮಹಾದ್ರೋಹಕ್ಕೆ ದಲಿತ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ” ಎಂದರು.
“ಸದ್ಯ ಸುಪ್ರೀಂಕೋರ್ಟ್ ಇಂದಿರಾ ಶೆಣೈ ಪ್ರಕರಣದಲ್ಲಿ ಮೀಸಲಾತಿ ಮಿತಿಯನ್ನು ಶೇ.50ಕ್ಕೆ ನಿಗದಿಗೊಳಿಸಿದೆ. ಆದರೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಏರಿಕೆಯಾಗಿದೆ. ಈ ಶೇ.56ರಷ್ಟು ಮೀಸಲಾತಿಯನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ? ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸದೇ ತನ್ನ ಅಂತಿಮ ವರದಿ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಮೀಸಲಾತಿಯ ಲಾಭ ಪಡೆಯುವುದಾದರೂ ಹೇಗೆ” ಎಂದು ಪ್ರಶ್ನಿಸಿರು.
“ಬೊಮ್ಮಾಯಿ ಅವರ ಸರ್ಕಾರ ಮುಸಲ್ಮಾನ ಅಲ್ಪಸಂಖ್ಯಾತರ ಮೀಸಲಾತಿಯನ್ನು ಆರ್ಥಿಕ ದುರ್ಬಲ ವರ್ಗಕ್ಕೆ (EWS) ನೀಡಲಾಗುವ ಮೀಸಲಾತಿಗೆ ವರ್ಗಾಯಿಸಿರುವುದು ಅಸಂವಿಧಾನಿಕವಾಗಿದೆ. ಈ ವರ್ಗೀಕರಣದಲ್ಲಿ ಆರ್ಥಿಕ ಸ್ಥಿತಿಗತಿ ಮೇಲೆ ಮೀಸಲಾತಿ ನಿಗದಿಯಾಗುತ್ತದೆಯೇ ಹೊತರು, ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಸಿಗುವುದಿಲ್ಲ. ಈ ವರ್ಗೀಕರಣಕ್ಕೆ ಮುಸಲ್ಮಾನರನ್ನು ವರ್ಗಾವಣೆ ಮಾಡದಿದ್ದರೂ ಈ ಸಮುದಾಯದ ಆರ್ಥಿಕವಾಗಿ ಹಿಂದುಳಿದವರು ಈ ವರ್ಗದಲ್ಲಿ ಮೀಸಲಾತಿ ಪಡೆಯಲಿದ್ದಾರೆ. ಆದರೂ ಬೊಮ್ಮಾಯಿ ಅವರು ಈ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗದ ಕೋಟಾಗೆ ಸೇರಿಸುವ ನಾಟಕ ಮಾಡುತ್ತಿರುವುದೇಕೆ?” ಎಂದು ಹರಿಹಾಯ್ದರು.