ಕೃಷಿ ಪಂಫ್ಸೆಟ್ಗಳಿಗೆ ಮೀಟರ್ ಆಳವಡಿಸದೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ಕರ್ನಾಟಕ ವಿದ್ಯುತ್ಚ್ಛಕ್ತಿ ಬೆಲೆ ನಿಯಂತ್ರಣ ಆಯೋಗವು (ಕೆಇಆರ್ಸಿ) ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಪ್ರತಿ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿ ಆಧಾರ್ ನೊಂದಣಿ ಮಾಡಬೇಕು ಎಂದು ತಿಳಿಸಿದೆ. ಕೆಇಆರ್ಸಿ ಗ್ರಾಹಕರ ಹಿತರಕ್ಷಣೆ ಮಾಡಬೇಕಾಗಿದ್ದು, ಅದರ ಬದಲಾಗಿ ನೀತಿ ನಿಯಮಗಳನ್ನು ಸರ್ಕಾರಕ್ಕೆ ನಿರ್ದೇಶನ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತ ರೈತರು ಅಸಮಧಾನ ವ್ಯಕ್ತಪಡಿಸಿದರು.
ಸರ್ಕಾರಗಳು ಅಣೆಕಟ್ಟು ಕಟ್ಟಿ ಕಾಲುವೆ ತೋಡಿ ರೈತರ ಜಮೀನಿಗೆ ನೀರುಣಿಸಲು, ದೇಶದ ಆಹಾರ ಭದ್ರತೆ ಕಾಪಾಡಲು ಅಗಾಧವಾಗಿ ವ್ಯಯ ಮಾಡಬೇಕಾಗುತ್ತದೆ. ಹಿಂದೆ ನಿರ್ಮಾಣ ಮಾಡಿದ ನೀರಾವರಿ ಯೋಜನೆಗಳಲ್ಲಿ ಕೇವಲ ಭತ್ತ ಮಾತ್ರ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಲೆನಾಡು ಪ್ರಾಂತ್ಯ ಹಾಗೂ ಬಯಲುಸೀಮೆಯಲ್ಲಿ ಅಡಿಕೆ ಬೆಳೆ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಕೃಷಿ ಪಂಪ್ಸೆಟ್ನ ರೈತರು ತಾವೇ ಸ್ವಂತ ಬಂಡವಾಳ ಹೂಡಿ ಆಹಾರಕ್ಕೆ ಬೇಕಾಗುವ ಹಣ್ಣು ತರಕಾರಿಯಿಂದ ಹಿಡಿದು ದ್ವಿದಳ ಧಾನ್ಯಗಳ ಬೆಳೆ ಬೆಳೆದು, ರಾಗಿ, ಜೋಳದಂತಹ ಆಹಾರ ಬೆಳೆದು ದೇಶದ ಆಹಾರ ಭದ್ರತೆಯನ್ನು ಕಾಪಾಡುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಈಗ ಕೆಇಆರ್ಸಿ ಯ ನಿರ್ದೇಶನವು ಕೃಷಿ ಪಂಪ್ಸೆಟ್ ರೈತರ ಕತ್ತು ಹಿಸುಕಿದಂತಾಗುತ್ತದೆ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಮಕ್ಕಳ ಮನಸ್ಸಿನಲ್ಲಿ ವಿಷ ತುಂಬುವ ಪಾಠಗಳಿಗೆ ಅವಕಾಶವಿಲ್ಲ : ಸಿಎಂ ಸಿದ್ದರಾಮಯ್ಯ
ಸರ್ಕಾರವು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಮತ್ತು ಆಧಾರ್ ನೊಂದಣಿ ಮಾಡುವ ಕೆಲಸವನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಚಳವಳಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಧನಂಜಯ, ನುಲೆನೂರು ಶಂಕ್ರಪ್ಪ, ಮಲ್ಲಿಕಾರ್ಜುನ್, ಚೇತನ ಯಳನಾಡು, ಸುರೇಶ್ ಬಾಬು, ರಂಗಸ್ವಾಮಿ, ಹೊರಕೆರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರವಿ ಕೆಂಗುಂಟೆ ಹಾಗೂ ರೈತರು ಭಾಗವಹಿಸಿದ್ದರು.