ಗದಗ ಜಿಲ್ಲೆಯ ರೋಣ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮತ್ತು ಭೀಮ್ ಆರ್ಮಿ ತಾಲೂಕು ಸಮಿತಿ ಸದಸ್ಯರು ರಸ್ತೆ ತಡೆದು ಪ್ರತಿಭಟನೆ ನಡೆಸಿ ರೋಣ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಹನಮಂತ ಚಲವಾದಿ ಮಾತನಾಡಿ, “ರೋಣ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ನಿಯಮ ಮೀರಿ ಲಾರಿಗಳಲ್ಲಿ ಹೆಚ್ಚಿನ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದಾರೆ. ಈ ಕುರಿತು ಎಷ್ಟೇ ಮನವಿ ಮಾಡಿದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಆರೋಪಿಸಿದರು.
ರೋಣ ನಗರ ಮತ್ತು ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಅತಿಯಾದ ಮರಳು ತುಂಬಿದ ಲಾರಿಗಳ ಓಡಾಟದಿಂದ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಅಪಘಾತಗಳ ಪ್ರಮಾಣ ಹೆಚ್ಚುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸದೆ ಮೌನವಾಗಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು
ಸ್ಥಳಕ್ಕೆ ಬಂದ ರೋಣ ತಹಶೀಲ್ದಾರ್ ನಾಗರಾಜ.ಕೆ ಮನವಿ ಸ್ವೀಕರಿಸಿ ಮುಖ್ಯಂತ್ರಿಗಳಿಗೆ ತಲುಪಿಸುವ ಮತ್ತು ತಮ್ಮ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಸ್ಡಿಪಿಐ ಕಾರ್ಯಕರ್ತ, ಧಾರ್ಮಿಕ ಮುಖಂಡನ ಭೀಕರ ಹತ್ಯೆ
ಭೀಮ್ ಆರ್ಮಿ ರೋಣ ತಾಲೂಕು ಘಟಕದ ಅಧ್ಯಕ್ಷ ಮುತ್ತು ನಂದಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚಲವಾದಿ, ಪುರಸಭೆ ಸದಸ್ಯ ಸಂತೋಷ ಕಡಿವಾಲ, ಭೀಮ್ ಆರ್ಮಿ ರೋಣ ತಾಲೂಕು ಘಟಕದ ಉಪಾಧ್ಯಕ್ಷ ಪುಂಡಲೀಕ ಮಾದರ, ಪದಾಧಿಕಾರಿಗಳಾದ ಸುರೇಶ ಹಲಗಿ, ಅಭಿಷೇಕ ಕೊಪ್ಪದ, ಚಂದ್ರು ಮಾದರ, ಮಹೇಶ ಮಾದರ, ರವಿ ಜೋಗಣ್ಣವರ, ಬಾಲರಾಜ ಹಲಗಿ ಇದ್ದರು.
