- ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ‘ರೋಜ್ಗಾರ್ ಜಾಗೃತಿ ವಾಹನ’
- ಜಾಗೃತಿ ಸಂಚಾರ ವಾಹನಕ್ಕೆ ಗ್ರಾ.ಪಂ ಅಧ್ಯಕ್ಷ ಹಸಿರು ನಿಶಾನೆ
ಚಿಕ್ಕನರಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನೆ ಮನೆಗೂ ಮನರೇಗಾ ಯೋಜನೆ ತಲುಪುವಂತಾಗಬೇಕು. ಯೋಜನೆಯ ಉದ್ದೇಶ ಸಾಕಾರವಾದಾಗ ಮಾತ್ರ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಜಾರಿಗೆ ತಂದಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಕಂಬಳಿ ಹೇಳಿದ್ದಾರೆ.
ಗದಗ ಜಿಲ್ಲೆ ನರಗುಂದ ತಾಲೂಕಿನಾದ್ಯಂತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಸಮರ್ಪಕ ಅನುಷ್ಠಾನಗೊಳಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಸಂಚರಿಸುತ್ತಿರುವ ‘ರೋಜಗಾರ ಜಾಗೃತಿ ವಾಹಿನಿ’ ರಥವು ಚಿಕ್ಕನರಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಆಗಮಿಸಿತ್ತು.
ಚಿಕ್ಕನರಗುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಣ ಕಂಬಳಿ ವಾಹನಕ್ಕೆ ನಿಶಾನೆ ತೋರಿ ಮಾತನಾಡಿದರು. “ಮನರೇಗಾ ಯೋಜನೆ ಅಡಿಯಲ್ಲಿ ನಡೆಯುವ ಹಲವು ಕಾಮಗಾರಿಗಳು ಬಡ ಕೂಲಿಕಾರರಿಗೆ ವರದಾನವಾಗಿವೆ. ಬಡ ಕೂಲಿಕಾರರು ಈ ಯೋಜನೆಯ ಅಡಿಯಲ್ಲಿ ದೊರಕುವ ಹಲವು ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಗ್ರಾಮವನ್ನು ಅಭಿವೃದ್ಧಿಗೊಳಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಯಾದಗಿರಿ | ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಮಾತನಾಡಿ, “ಮನರೇಗಾ ಯೋಜನೆಯು ಬಡ ಕೂಲಿಕಾರರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಯೋಜನೆಯಾಗಿದ್ದು, ಇದನ್ನು ಗ್ರಾಮದ ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಂಡು ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು” ಎಂದು ಹೇಳಿದರು.
ಮನರೇಗಾ ಯೋಜನೆ ಅಡಿ ಪಿಂಕ್ ಶೌಚಾಲಯ, ಆಟದ ಮೈದಾನ, ರಸ್ತೆ, ಶಾಲಾ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧ ಕಾರ್ಯ ನಡೆದಿದೆ. ವಾಹನ ಪ್ರಚಾರ ಕಾರ್ಯದಲ್ಲಿ ನಮ್ಮ ಗ್ರಾಮದ ನರೇಗಾ ಕಾಮಗಾರಿ ಅಡಿಯಲ್ಲಿ ಮಾಡಿದ ಬಾಸ್ಕೆಟ್ಬಾಲ್ ಮೈದಾನದ ಚಿತ್ರ ಬಳಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ರೋಜ್ಗಾರ್ ಜಾಗೃತಿ ವಾಹನ’ಕ್ಕೆ ಚಾಲನೆ ನೀಡುವ ವೇಳೆ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕು. ಶೈನಜಾ ಮುಜಾವರ, ತಾಲೂಕ ಪಂಚಾಯತಿ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ, ಬಿ.ಎಫ್.ಟಿ ರವಿಭರಮಣ್ಣ ಸೇರಿದಂತೆ ಚಿಕ್ಕನರಗುಂದ ಗ್ರಾಮ ಪಂಚಾಯತಿಯ ಹಲವಾರು ಸಿಬ್ಬಂದಿಗಳು ಹಾಗೂ ಗ್ರಾಮದ ಹಲವರು ಹಾಜರಿದ್ದರು.