ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ಝಳದಿಂದ ಬೇಸತ್ತಿದ್ದ ಜನತೆಗೆ ತಂಪಿನ ವಾತಾವರಣದ ಅನುಭವ ನೀಡಿದೆ.
ಹುಬ್ಬಳ್ಳಿ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು ಮಿಂಚಿನ ಸಹಿತ ಉತ್ತಮ ಮಳೆಯಾಗಿದೆ. ಸೋಮವಾರ ಸಂಜೆಯೂ ಒಂದಿಷ್ಟು ಮಳೆಯಾಗಿ ಇಳೆ ತಂಪಾಗಿತ್ತು. ಚಂಡಮಾರುತದ ಪರಿಣಾಮದಿಂದ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ಹೊಕ್ಕಿದೆ. ಗ್ರಾಮೀಣ ಭಾಗದಲ್ಲಿ ಉಳುಮೆಗೆ ಅನುಕೂಲವನ್ನೂ ಮಾಡಿಕೊಟ್ಟಿದೆ.
“ಜೂನ್ ಮೊದಲ ವಾರ ಮುಂಗಾರು ಆರಂಭವಾಗುವ ಹಿನ್ನಲೆಯಲ್ಲಿ ಭೂಮಿ ಹದಗೊಳಿಸಲು ಮಳೆಯ ಅವಶ್ಯಕತೆ ಇತ್ತು. ಈಗ ಸುರಿದ ಮಳೆಯಿಂದಾಗಿ ರೈತರು ಮುಂಗಾರು ಬಿತ್ತನೆಯ ತಯಾರಿಯಲ್ಲಿದ್ದಾರೆ.
ಅಲ್ಲಲ್ಲಿ ರಸ್ತೆ, ಚರಂಡಿ ಕಾಮಗಾರಿ ನಡೆಯುತ್ತಿವೆ. ಈಗ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ನೀರು ಸಂಪೂರ್ಣ ರಸ್ತೆಯನ್ನು ಆವರಿಸಿದೆ. ಇದರಿಂದ ಜನರ ಓಡಾಟಕ್ಕೂ ತೊಂದರೆಯಾಗಿದೆ. ಯಾವುದು ರಸ್ತೆ, ಯಾವುದು ಗುಂಡಿ ಎಂಬುದು ತಿಳಿಯದೆ ದ್ವಿಚಕ್ರ ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅರ್ಧ ಗಂಟೆ ಸುರಿದ ಮಳೆಗೆ ಕೆರೆಯಂತಾದ ರಸ್ತೆಗಳು
ಹುಬ್ಬಳ್ಳಿ ನಗರದಲ್ಲಿ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದ ಪರಿಣಾಮ ರಸ್ತೆ ಮೇಲೆಯೇ ನೀರು ಹರಿಯುತ್ತಿದ್ದು, ಹಲವಾರು ಬೈಕ್ಗಳು ಮಳೆ ನೀರಿನಿಂದ ಆವೃತವಾಗಿವೆ. ಇನ್ನು ಮಾರುಕಟ್ಟೆ ಪ್ರದೇಶದಲ್ಲಿನ ಪರಿಸ್ಥಿತಿಯಂತೂ ಹೇಳತೀರದು. ಮಳೆಯಾಗುವ ಸೂಚನೆ ಇದ್ದರೂ ನಿರೀಕ್ಷೆಗೆ ಮೀರಿ ಮಳೆಯಾಗಿದೆ.
ಹುಬ್ಬಳ್ಳಿ ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಚುನಾವಣಾ ಮಸ್ಟರಿಂಗ್ ಕೇಂದ್ರವಿದ್ದು, ಮಳೆಯಿಂದಾಗಿ ಮಸ್ಟರಿಂಗ್ ಕಾರ್ಯವು ಅಸ್ತವ್ಯಸ್ತವಾಗಿದೆ. ಊಟದ ಸಮಯಕ್ಕೆ ಮಳೆ ಸುರಿದ ಪರಿಣಾಮ ಇಡೀ ಶಾಮಿಯಾನ ಸೋರಲಾರಂಭಿಸಿದೆ. ಇನ್ನು ಮತಯಂತ್ರ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ತೆಗೆದುಕೊಂಡು ವಾಹನದ ಬಳಿ ಹೋಗಲಾರದಂತಹ ಸ್ಥಿತಿ ನಿರ್ಮಾಣವಾಗಿದ್ದು, ಚುನಾವಣಾ ಸಿಬ್ಬಂದಿ ಪರದಾಡುವಂತಾಗಿದೆ.