- ತಡೆಗೋಡೆ ನಿರ್ಮಿಸಿ ಭಕ್ತರ ಭಾವನೆ, ನಂಬಿಕೆ ಅವಮಾನಿಸಿದ ಪೊಲೀಸರು
- ʼಸಮಾಜದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕುʼ
ಹಿಂದು-ಮುಸ್ಲಿಮರ ಸೌಹಾರ್ದ ನೆಲವಾದ ರಟಕರ್ ಗ್ರಾಮದ ಗ್ರಾಮಸ್ಥರ ನಡುವೆ ಪೊಲೀಸರೇ ಕೋಮು ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿರುವ ಐತಿಹಾಸಿಕ ಮಹೆಬೂಬ್ ಸುಬಹಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಪೊಲೀಸರು ತಡೆಗೋಡೆ ಕಟ್ಟಿದ್ದಾರೆ ಎಂದು ನ್ಯಾಯವಾದಿ ಅಶ್ವಿನಿ ಮದನಕರ್ ಆರೋಪಿಸಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾ ಇದೆ. ಆ ದರ್ಗಾದ ಪ್ರವೇಶ ದ್ವಾರಕ್ಕೆ ಪೊಲೀಸರು ತಡೆಗೋಡೆ ಕಟ್ಟಿದ್ದು, ಅದನ್ನು ತೆರವುಗೊಳ್ಳುವಂತೆ ಒತ್ತಾಯಿಸಿ ಸೌಹಾರ್ದ ಸಮಿತಿಯ ನಿಯೋಗ ರಟಕಲ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ಅಶ್ವಿನಿ ಮದನಕರ್, “ಶತಮಾಗಳಷ್ಟು ಹಳೆಯದಾದ ಹಜರತ್ ಮಹೆಬೂಬ್ ಸುಬಾನಿ ದರ್ಗಾದ ಹಳೆಯ ಪ್ರವೇಶ ದ್ವಾರಕ್ಕೆ ತಡೆಗೋಡೆ ಕಟ್ಟುವ ಮೂಲಕ ಪೊಲೀಸರು ಭಕ್ತರ ಭಾವನೆಗೆ ಮತ್ತು ಅವರ ನಂಬಿಕೆಗೆ ಅವಮಾನಿಸಿದ್ದಾರೆ” ಎಂದು ದೂರಿದರು.
“ಪೊಲೀಸ್ ಠಾಣೆ ನಿರ್ಮಾಣವಾಗುವುದಕ್ಕೂ ಮೊದಲೇ ದರ್ಗಾ ಇತ್ತು. ಆದರೆ, ನಂತರದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ದರ್ಗಾದ ಜಮೀನು ಖರೀದಿಸಲಾಯಿತು. ಅಧಿಕಾರಿಗಳು ಭೂಮಿ ಖರೀದಿಸಬಹುದು. ಆದರೆ ದರ್ಗಾ ಮತ್ತು ಭಕ್ತರ ಭಾವನೆ ಖರೀದಿಸಲು ಸಾದ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ರಮೇಶ್ ಕೆ ರಾಗಿ ಮಾತನಾಡಿ, “ಪೊಲೀಸ್ ಇಲಾಖೆ ಸಾರ್ವಜನಿಕರ ಸಂಕಟಕ್ಕೆ ಸ್ಪಂದಿಸಲು ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು. ಆದರೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಜರತ್ ಮಹೆಬೂಬ್ ಸುಬಾನಿ ದರ್ಗಾಕ್ಕೆ ಹೋಗುವ ಅತ್ಯಂತ ಹಳೆಯ ರಸ್ತೆಗೆ ತಡೆಗೋಡೆ ನಿರ್ಮಿಸುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೊಲೆ ಪ್ರಕರಣ ಭೇದಿಸಲು ಪೊಲೀಸರಿಗೆ ನೆರವಾದ ‘ಆ್ಯಪ್’
“ಸಾರ್ವಜನಿಕರಿಗೆ ದೇವರ ದರ್ಶನ ಮಾಡಲು ಸಮಸ್ಯೆ ಉಂಟಾಗುತ್ತಿದೆ, ಹಾಗಾಗಿ, ಈ ಕೂಡಲೇ ತಡೆಗೋಡೆ ತೆರವುಗೊಳಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶಮಾಡಿಕೊಡಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಶ್ವಿನಿ ಮದನಕರ್, ಸಾಮಾಜಿಕ ಕಾರ್ಯಕರ್ತ ವಿಕ್ರಮ್ ತೇಜಸ್, ಪ್ರಿಯಾಂಕಾ ಮಾವಿನಕರ್ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಇದ್ದರು.