ನೀಟ್ ಹೋರಾಟದ ವಿಚಾರದಲ್ಲಿ ಇವರು ಮಾತನಾಡಲಿಲ್ಲ, ಪ್ರತಿಭಟನೆ ಮಾಡಲಿಲ್ಲ. ಪ್ರತಿಭಟನಾನಿರತ ಹೆಣ್ಣುಮಕ್ಕಳ ಮೇಲೆ ಲಾಠಿ ಚಾರ್ಜ್ ಮಾಡಿ ನಿರ್ದಯವಾಗಿ ನಡೆದುಕೊಂಡರು. ದೆಹಲಿಯಲ್ಲಿ ಮಹಿಳೆಯರ ಮೇಲೆ ಮೊಳೆ ಸಿಕ್ಕಿಸಿದ ಲಾಠಿಯಿಂದ ಮನಬಂದಂತೆ ಯುವತಿಯರನ್ನು, ಅಪ್ರಾಪ್ತೆಯರನ್ನು ಥಳಿಸಿದ್ದಾರೆ. ಆದ್ದರಿಂದ ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರಿಗೆ ಸ್ಥಾನಮಾನ ನೀಡದಿರುವ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರಿಂದ ಮಹಿಳಾ ಸ್ಥಾನಮಾನದ ಬಗ್ಗೆ ಪಾಠ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಸಂಪುಟದಲ್ಲಿ ಮತ್ತು ಇತರೆಡೆ ಸ್ಥಾನಮಾನ ಕೊಟ್ಟೇ ಕೊಡುತ್ತದೆ” ಎಂದು ಸ್ಪಷ್ಟಪಡಿಸಿದರು.
ತಾಯಿ ಕಾವೇರಿಗೆ ನಮಸ್ಕರಿಸಿದ ಬಳಿಕ ಮಾತನಾಡಿದ ಅವರು, “ನಾಡಿನಲ್ಲಿ ಬರ ಬರಬಹುದು ಎಂಬ ಭಯ ಇಡೀ ನಾಡನ್ನು ಕಾಡಿತ್ತು. ನಾಡಿಗೆ ಜೀವಜಲ ಒದಗಿಸುವ ತಾಯಿ ಕಾವೇರಿ ವರ ನೀಡಿದ್ದಾಳೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಕಾವೇರಿ ಕೃಪೆ ತೋರಿದ್ದಾಳೆ. ಇಂತಹ ತಾಯಿಗೆ ನಮಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಕಾವೇರಿ ರಾಜ್ಯ ಮಾತ್ರವಲ್ಲದೆ ನೆರೆರಾಜ್ಯದ ದಾಹವನ್ನೂ ತಣಿಸುವ ಮಾತೆ. ಮಂಡ್ಯದವನಾಗಿ ಮೊದಲು ಕಾವೇರಿ ತಾಯಿಗೆ ನಮಸುವವನು ನಾನು” ಎಂದು ಹೇಳಿದರು.
ಸಚಿವ ಸ್ಥಾನ ತಪ್ಪಿರುವುದನ್ನು ಖಂಡಿಸಿ ಹಲವೆಡೆ ನಡೆದ ಹೋರಾಟಗಳ ಬಗ್ಗೆ ಮಾತನಾಡಿದ ಅವರು, “ಒಂದೇ ತಂದೆ-ತಾಯಿಗೆ ಹುಟ್ಟಿದ ಮಕ್ಕಳೇ ಮನೆಯಲ್ಲಿ ಕಿತ್ತಾಡುತ್ತಾರೆ. ಕಾಂಗ್ರೆಸ್ ಕೂಡ ಒಂದು ಮನೆಯಂತೆ. ಅಸಮಾಧಾನ ಬರುತ್ತದೆ, ಹೋಗುತ್ತದೆ. ಸಹಜವಾಗಿ ಎಲ್ಲರೂ ಆಕಾಂಕ್ಷಿಗಳಾಗಿದ್ದರು. ಎಲ್ಲರಿಗೂ ಸಿಗಲು ಸಾಧ್ಯವಿಲ್ಲ” ಎಂದರು.
ಕಾಂಗ್ರೆಸ್ನದ್ದು ‘ಸೂಟ್ಕೇಸ್ ಕ್ಯಾಬಿನೆಟ್’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಪಕ್ಷದ ಕೆಲಸ ಮಾಡಿದವರನ್ನು ಪಕ್ಷ ಗುರುತಿಸುತ್ತದೆ. ನನ್ನನ್ನು ಹಿಂದೆ ಗುರುತಿಸಿರಲಿಲ್ಲ. ಈಗ ಗುರುತಿಸಿ ಸ್ಥಾನಮಾನ ನೀಡಿದ್ದಾರೆ. ಎಲ್ಲರೂ ತಾಳ್ಮೆಯಿಂದ ಕಾಯಬೇಕು, ಅಷ್ಟೇ” ಎಂದು ಹೇಳಿದರು.




