ನಗರದ ಕೆ.ಇ.ಬಿ.ಸಮುದಾಯ ಭವನದಲ್ಲಿ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು ಹಾಗೂ
ಖಾಸಗಿಕರಣದ ವಿರುದ್ಧ ಹೋರಾಟ ಮಾಡಲು ಸರ್ವಾನುಮತದಿಂದ ತೀರ್ಮಾನ ಅಂಗೀಕರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹಲವು ಸಂಘಟನೆಗಳ ಮುಖಂಡರುಗಳು ಖಾಸಗಿಕರಣದಿಂದ ಸಾಮಾನ್ಯ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆ ಆಗಲಿದ್ದು, ,ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ವಿದ್ಯುತ್ ಸೇವೆಗಳ ರಕ್ಷಣೆಯೇ ನಮ್ಮ ಪ್ರಮುಖ ಉದ್ದೇಶವಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯ ಬಗ್ಗೆ ನಮ್ಮ ತೀವ್ರ ವಿರೋಧವನ್ನು ಈ ಮೂಲಕ ದಾಖಲಿಸುತ್ತೇವೆ ಎಂದರು.
ಕೋಲಾರ ವಲಯದ ಏಪ್ರಿಲ್-2026ರ ಡಿಸಿಬಿ ಅಂಕಿ-ಅಂಶಗಳ ಪ್ರಕಾರ ಒಟ್ಟು 14,34,030 ಗ್ರಾಹಕರು ಇದ್ದು, ಮಾಸಿಕ ಒಟ್ಟು ಆದಾಯ ಬೇಡಿಕೆ ₹438.89 ಕೋಟಿ ಆಗಿದೆ. LT-1 (ಗೃಹ ಜ್ಯೋತಿ/ಕುಟೀರ ಜ್ಯೋತಿ), LT-4 (ಕೃಷಿ ಪಂಪ್ಸೆಟ್), LT-6-WS-(ನೀರು ಸರಬರಾಜು), LT-6 SL-(ಬೀದಿ- ದೀಪಗಳು) ಸೇರಿದಂತೆ ಸರ್ಕಾರದ ಅನುದಾನಿತ ವರ್ಗಗಳಿಗೆ ಸೇರಿದ 12,33,339 ಗ್ರಾಹಕರಿಂದ ₹344.94 ಕೋಟಿ ಮೌಲ್ಯದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ವರ್ಗಗಳಿಂದ ಬರುವ ಅನುದಾನ ಮೊತ್ತ ನೇರವಾಗಿ ಬೆಸ್ಕಾಂ ಖಾತೆಗೆ ಜಮೆಯಾಗುವುದಿಲ್ಲ.ಉಳಿದ ಕೇವಲ 2,00,507 ಗ್ರಾಹಕರು ಮಾತ್ರ ಬೆಸ್ಕಾಂಗೆ ಆದಾಯ ತರುವ ವರ್ಗಗಳಾಗಿದ್ದು, ಇವರಿಂದ ಮಾಸಿಕ ಸುಮಾರು *91.55 ಕೋಟಿ ಆದಾಯ ದೊರೆಯುತ್ತದೆ ಎಂದು ವಿವರಿಸಿದರು.
ಇಂತಹ ಸಂದರ್ಭದಲ್ಲಿ ಟಾಟಾ ಪವರ್ ಕಂಪನಿಯು ಲಾಭದಾಯಕ ಗ್ರಾಹಕರನ್ನು ಮಾತ್ರ ಆಯ್ಕೆ ಮಾಡಿಕೊಂಡು ಸೇವೆ ನೀಡಲು ಅವಕಾಶ ದೊರೆತರೆ, ಬೆಸ್ಕಾಂ ಸಂಸ್ಥೆಯ ಆರ್ಥಿಕ ಸ್ಥಿತಿ ಹದಗೆಡುವ ಅಪಾಯವಿದೆ ಎಂದರು.
ಖಾಸಗೀಕರಣ ಪರಿಣಾಮವಾಗಿ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆಗೆ ಧಕ್ಕೆಯಾಗಬಹುದು,ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸೇವೆಗಳ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಬೆಸ್ಕಾಂಗೆ ಭಾರ ಹೆಚ್ಚಾಗುತ್ತದೆ, ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಉಂಟಾಗಬಹುದು, ವಿದ್ಯುತ್ ಕ್ಷೇತ್ರದಲ್ಲಿ ಅಸಮಾನ ಸ್ಪರ್ಧೆ ಉಂಟಾಗಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ, ಬೆಸ್ಕಾಂನ ಆರ್ಥಿಕ ಸಾಮರ್ಥ್ಯ ಕುಸಿದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರು ನೇರವಾಗಿ ತೊಂದರೆಗೆ ಒಳಗಾಗುತ್ತಾರೆ, ಆದ್ದರಿಂದ, ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 14 ಮತ್ತು 15 ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ, ರೈತರ ಹಿತಾಸಕ್ತಿ ಹಾಗೂ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ಪರವಾನಗಿ ನೀಡುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.
ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಅನಿವಾರ್ಯ ಆದರೆ ಹೋರಾಟ ಮಾಡುವ ಹಾಗೂ ಇದೇ ತಿಂಗಳ 21 ರ ಒಳಗೆ ಎಲ್ಲಾ ಸಂಸ್ಥೆಗಳು,ಸಂಘಟನೆ ಗಳು ತಮ್ಮ ಆಕ್ಷೇಪಣೆ ಸಲ್ಲಿಸಲು ತೀರ್ಮಾನವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು ಹಾಗೂ ಸಾಂಕೇತಿಕವಾಗಿ ನಗರದ ಡೂಂ ಲೈಟ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಇದನ್ನು ಓದಿದ್ದೀರಾ..? ಕೋಲಾರ | ದಲಿತ ಚಳುವಳಿಯ ಹೆಜ್ಜೆ ಗುರುತುಗಳೇ ಯುವಕರಿಗೆ ಸ್ಪೂರ್ತಿಯಾಗಬೇಕು: ಎಂಎಲ್ಸಿ ಅನಿಲ್ ಕುಮಾರ್
ಸಭೆಯಲ್ಲಿ ಬೆಸ್ಕಾಂ ನ ಸಂಘಟನೆಯ ಪದಾಧಿಕಾರಿಗಳು, ರೈತ ಸಂಘದ ಮುಖಂಡರುಗಳು, ಕನ್ನಡ ಪರ ಸಂಘಗಳ ಮುಖಂಡರುಗಳು,ಸಿ.ಪಿ.ಎಂ,ಜೆ.ಡಿ.ಎಸ್ ಪಕ್ಷಗಳ ಮುಖಂಡರುಗಳು,ಹಲವು ಜನರ ಸಂಘಟನೆಗಳ ಪದಾಧಿಕಾರಿಗಳು
ಸಾರ್ವಜನಿಕರು ಭಾಗವಹಿಸಿದ್ದರು.




