ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚನ್ನಕೇಶವ ದೇವಾಲಯದ ಮೇಲ್ಭಾಗದ ಕಳಸದ ಪಕ್ಕವಿರುವ ಎರಡು ಕೊಂಬುಗಳಲ್ಲಿ ಒಂದು ಭಾಗಕ್ಕೆ ಸಿಡಿಲು ಬಡಿದಿದ್ದು, ಪರಿಣಾಮ ಹಾನಿಯಾಗಿ ಬಿರುಕು ಬಿಟ್ಟಿದೆ.
ಗುರುವಾರ ಮಧ್ಯಾಹ್ನ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದ್ದು, ಬೇಲೂರಿನ ಚನ್ನಕೇಶವ ದೇವಾಲಯದ ಮೇಲ್ಭಾಗಕ್ಕೆ ಹಾನಿಯಾಗಿದೆ. ತಹಶೀಲ್ದಾರ್ ಎಂ ಮಮತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ‘ಪುರಾತತ್ವ ಇಲಾಖೆಯವರಿಗೆ ಮಾಹಿತಿ ನೀಡಿ, ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಕುರಾನ್ ಪಠಣ ವಿವಾದದಿಂದ ರಥೋತ್ಸವಕ್ಕೆ ಅಡ್ಡಿಯಾಗದು; ವಿದ್ಯುಲ್ಲತಾ ಸ್ಪಷ್ಟನೆ
ದೇಗುಲದ ಪ್ರಧಾನ ಅರ್ಚಕರುಗಳಾದ ಶ್ರೀನಿವಾಸ್ ಭಟ್ ಹಾಗೂ ನರಸಿಂಹಪ್ರಿಯಭಟ್ ಮಾತನಾಡಿ, “ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ದೇವಾಲಯಕ್ಕೆ ಹಾಗೂ ಗೋಪುರಗಳಿಗೆ ಯಾವುದೇ ರೀತಿಯ ಸಿಡಿಲು ಹಾಗೂ ಪ್ರಕೃತಿ ವಿಕೋಪದಿಂದ ಹಾನಿ ಆಗದಂತೆ ನಿರ್ಮಾಣ ಮಾಡಿದ್ದಾರೆ. ಆದರೆ, ಸಿಡಿಲಿನಿಂದ ಹಾನಿಯಾಗಿದೆ. ಯಾವ ಭಕ್ತಾದಿಗಳು ಆತಂಕ ಪಡುವ ಅಗತ್ಯತೆ ಇಲ್ಲ. ಆಗಮಿಕರ ಸಲಹೆ ಪಡೆದು ಅಂತರಂಗ ಶುದ್ಧಿ ಹಾಗೂ ಅಂಗೋದಕ ಶುದ್ಧಿ ಮಾಡಲಾಗುವುದು” ಎಂದರು.
ದೇಗುಲ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಕಂದಾಯ ನಿರೀಕ್ಷಕ ಪ್ರಕಾಶ್ ಇದ್ದರು.