ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೇವದುರ್ಗದ ರೇಕಲಮರಡಿ, ಲಿಂಗಸುಗೂರು, ಗೊರೆಬಾಳ ಬಳಿಕ ಜೂಲಗುಡ್ಡದಲ್ಲೂ ಜೀವಜಲವು ವಿಷಜಲವಾಗಿದೆ. ರೇಕಲಮರಡಿ ಗ್ರಾಮದಲ್ಲಿ ಒಳೆದ ವಾರ ಕಲುಷಿತ ನೀರು ಕುಡಿದು, 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಬಾಲಕನೊಬ್ಬ ಮೃತಪಟ್ಟಿದ್ದ. ಇದೀಗ, ಲಿಂಗಸುಗೂರು ತಾಲೂಕಿನ ಜೂಲಗುಡ್ಡ ಗ್ರಾಮದಲ್ಲೂ ಕಲುಷಿತ ನೀರು ಕುಡಿದು 8 ಮಂದಿ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಕುಡಿಯುವ ನೀರಿನ ಪೈಪ್ ಒಡೆದು ಇದಕ್ಕೆ ಕಲುಷಿತ ನೀರು ಸೇರಿದ ಪರಿಣಾಮ ಕಳೆದ ಮೂರು ದಿನಗಳಿಂದ ಈ ನೀರು ಕುಡಿದ ಗ್ರಾಮಸ್ಥರಲ್ಲಿ ತೀವ್ರ ವಾಂತಿ ಭೇದಿ ಕಾಣಿಸಿಕೊಂಡಿದೆ.
ಚರಂಡಿ ಮಗ್ಗುಲಲ್ಲೇ ಕುಡಿಯುವ ನೀರಿನ ಪೈಪ್ ಹಾದು ಹೋಗಿದ್ದು, ಮೂರು ಕಡೆ ಪೈಪ್ಗೆ ಹಾನಿಯಾಗಿದೆ. ಕುಡಿಯುವ ನೀರಿನ ಪೈಪ್ನಲ್ಲಿ ಸಣ್ಣ ಸಣ್ಣ ತೂತಗಳಾಗಿವೆ. ಈ ಮೂಲಕ ಚರಂಡಿ ನೀರು ಮಿಶ್ರಣವಾಗಿರಬಹುದೆಂದು ಅಂದಾಜಿಸಲಾಗಿದೆ. ಸುಮಾರು 200 ಮನೆಗಳಿಗೆ ಚರಂಡಿ ಮಿಶ್ರಿತ ನೀರು ಪೂರೈಕೆ ಆಗಿದೆ. ಈ ನೀರನ್ನು ಕುಡಿದವರು ಅಸ್ವಸ್ಥಗೊಂಡಿದ್ದಾರೆ.
ರೇಕಲಮರಡಿ: ನೀರು ಸರಬರಾಜು ಸ್ಥಗಿತ
ರೇಕಲಮರಡಿ ಗ್ರಾಮದಲ್ಲಿ ಜನರು ಕಲುಷಿತಗೊಂಡ ನೀರು ಸೇವಿಸಿದ್ದರಿಂದ ಗ್ರಾಮಸ್ಥರು ಅಸ್ವಸ್ಥರಾಗಿದ್ದರು. ಸಿರವಾರ ಸರ್ಕಾರಿ ಆಸ್ಪತ್ರೆ ಸೇರಿದ್ದ ಹನುಮೇಶ್ (5) ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೇ 26ರಂದು ಮೃತಪಟ್ಟಿದ್ದ. ಇನ್ನು ಹನುಮೇಶ್ನ ಅಕ್ಕ ನರಸಮ್ಮ (8) ಕೂಡ ಅಸ್ವಸ್ಥಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲುಷಿತ ನೀರಿಗೆ ಬಾಲಕ ಬಲಿ; 30 ಮಂದಿ ಅಸ್ವಸ್ಥ
ಸದ್ಯ ರೆಕಲಮರಡಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ಬೇರೆ ಗ್ರಾಮಗಳಿಂದ ಕುಡಿಯುವ ನೀರನ್ನು ವಾಟರ್ ಟ್ಯಾಂಕ್ಗಳ ಮೂಲಕ ತಂದು ಪೂರೈಕೆ ಮಾಡಲಾಗುತ್ತಿದೆ. ಇತ್ತ ಗ್ರಾಮದಲ್ಲಿ ಚಿಕಿತ್ಸಾ ಕ್ಯಾಂಪ್ ನಿರ್ಮಾಣ ಮಾಡಿದ್ದು, 2 ಆ್ಯಂಬುಲೆನ್ಸ್, ಹಿರಿಯ ವೈದ್ಯರು, ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಗ್ರಾಮಸ್ಥರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಗ್ರಾಮಸ್ಥರ ಆರೋಗ್ಯ ಸ್ಥಿತಿ ಹತೋಟಿಗೆ ಬಂದಿದ್ದು, ಸ್ಥಳಕ್ಕೆ ಶಾಸಕಿ ಕರಿಯಮ್ಮ ಜಿ ನಾಯಕ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ