ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಯಚೂರು ಜಿಲ್ಲೆಯ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧಿಸಿ ರಾಯಚೂರು ಜಿಲ್ಲಾಧಿಕಾರಿ ಪುವಿತಾ ಎಸ್ ಅವರು ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು, ಮಾನವಿ, ಸಿರವಾರ, ದೇವದುರ್ಗ ಹಾಗೂ ಮಸ್ಕಿ ತಾಲೂಕಿನ ಒಟ್ಟು 29 ಗ್ರಾಮಗಳಲ್ಲಿ ಜೂ.17ರಿಂದ 26ರವರೆಗೆ ಸಾರ್ವಜನಿಕವಾಗಿ ಗುಂಪು ಗುಂಪಾಗಿ ಮೊಹರಂ ಆಚರಿಸುವುದು ಹಾಗೂ ಸಾರ್ವಜನಿಕ ಮೆರವಣಿಗೆ ನಡೆಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಿಣಿವಾರ, ಉಪ್ಪಳ, ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿಡಿಗೋಳ-ತಿಡಿಗೋಳ, ಹತ್ತಿಗುಡ್ಡ, ಕುರಕುಂದಾ, ಚಿಕ್ಕಬೇರ್ಗಿ, ಬಳಗನೂರು ಪೊಲೀಸ್ ಠಾಣೆಯ ಉದ್ದಳ(ಯು) ರಾಗಲಪರ್ವಿ, ಮಾನವಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿಹಾಳ, ಜಾನೇಕಲ್, ಮದ್ದಾಪುರ, ಜಾಗೀರ್ ಪನ್ನೂರು, ಮಲ್ಲಿನ ಮಡಗು, ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರವಾರ ಪಟ್ಟಣ, ಕಡದಿನ್ನಿ, ಬೊಮ್ಮನಾಳ, ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕವಿತಾಳ ಪಟ್ಟಣ, ಹಿರೆಬಾದರದಿನ್ನಿ, ಬಾಗಲವಾಡ, ಅಮೀನಗಡ, ಗೂಗೆಬಾಳ, ಮಸ್ಕಿ ತಾಲೂಕಿನ ತಲಖೇನಾ, ಸಂತೇಕಲ್ಲೂರು, ಮುಸಲಿ ಕಾರಲಕುಂಟೆ, ಜಾಲಹಳ್ಳಿಯ ಚಿಂಚೋಡಿ ಗ್ರಾಮ ಹಾಗೂ ಗಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾನಾಪೂರ, ಬುದ್ದಿನ್ನಿ, ರಾಮದುರ್ಗ, ಹಿರೆಬೂದೂರು ಗ್ರಾಮಗಳಲ್ಲಿ ನಿಷೇಧ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿದ ವರದಿಯಂತೆ, ಈ ಹಿಂದೆ ಮೊಹರಂ ಆಚರಣೆ ವೇಳೆ ಕೆಲ ಗ್ರಾಮಗಳಲ್ಲಿ ಅಲಾಯಿ ಕುಣಿಯುವ ಸಂದರ್ಭದಲ್ಲಿ ಕಾಲ್ತುಳಿತ, ಯುವಕರ ನಡುವೆ ಬಡಿಗೆ ಮತ್ತು ಬೆತ್ತ ಹಿಡಿದು ಜಗಳ, ಹಲ್ಲೆ ಸೇರಿದಂತೆ ಹಲವು ಘಟನೆಗಳು ನಡೆದಿದ್ದು, ಪ್ರಕರಣಗಳು ದಾಖಲಾಗಿದ್ದವು.
ಈ ವರ್ಷದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದು, ಹಿಂದಿನ ದ್ವೇಷದ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳ ಯುವಕರ ನಡುವೆ ಮತ್ತೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜೋಳ ಖರೀದಿ ಹಣ ಪಾವತಿಗೆ ಆಗ್ರಹಿಸಿ ರಸ್ತೆ ತಡೆದು ರೈತರು ಪ್ರತಿಭಟನೆ
ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆಯ್ದ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಮೊಹರಂ ಆಚರಿಸುವುದು ಹಾಗೂ ಮೆರವಣಿಗೆ ನಡೆಸುವುದನ್ನು ನಿಷೇಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿಫಾರಸು ಮಾಡಿದ್ದರು.




