ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಖೈದಿ ಪವನಕುಮಾರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಸಹ ಕೈದಿಗಳಿಂದ ನಿರಂತರವಾಗಿ ನಡೆದ ದೈಹಿಕ ಹಾಗೂ ಮಾನಸಿಕ ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆತ ಬರೆದಿರುವ ಡೆತ್ ನೋಟ್ನಲ್ಲಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಮೂವರು ಸಹ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ವಿಚಾರಣಾಧೀನ ಕೈದಿ ಪವನಕುಮಾರ ಹುಬ್ಬಳ್ಳಿ ಎಂಬಾತನನ್ನು ಚಿಕಿತ್ಸೆಗಾಗಿ ರಿಮ್ಸ್ ಖೈದಿ ವಾರ್ಡನಲ್ಲಿ ಜು.28 ರಂದು ದಾಖಲಿಸಲಾಗಿತ್ತು. ಆತನ ಶೌಚಕ್ಕೆ ಹೋಗುವುದಾಗಿ ಹೇಳಿ ಶೌಚಾಲಯ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತ ವ್ಯಕ್ತಿ ದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದಾಗ ಡೆತ್ನೋಟ ದೊರಕಿದ್ದು ಸಹ ಕೈದಿಗಳಾದ ಪ್ರಭಾಕರ ರೆಡ್ಡಿ, ವಿನಯರೆಡ್ಡಿ, ಮಹೇಶ ರಾಳಲದೊಡ್ಡಿ, ಶಿವರಾಜ ಸಿರವಾರ ಎಂಬುವರ ಕಿರುಕುಳವೇ ಕಾರಣವೆಂದು ಡೆತ್ನೋಟನಲ್ಲಿ ಬರೆದಿದ್ದರಿಂದ ಜಿಲ್ಲಾ ಕಾರಾಗೃಹದ ಅಧಿಕಾರಿ ಅನಿತಾ ಹೀರೆಮನಿ ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯ ಕೈದಿಗಳ ವಾರ್ಡ್ನಲ್ಲಿ ದಾಖಲಾಗಿದ್ದ ವೇಳೆ, ಸಹ ಕೈದಿಗಳಾದ ಪ್ರಭಾಕರರೆಡ್ಡಿ, ವಿನಯರೆಡ್ಡಿ, ಮಹೇಶ ರಾಳಲದೊಡ್ಡಿ, ಶಿವರಾಜ ಸಿರವಾರ ಸೇರಿದಂತೆ ಇನ್ನಿಬ್ಬರು ನಿತ್ಯವೂ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮೃತ ಪವನಕುಮಾರ ತನ್ನ ಡೆತ್ ನೋಟ್ನಲ್ಲಿ ಆರೋಪಿಸಿದ್ದಾನೆ.
ಡೆತ್ ನೋಟ್ ಪ್ರಕಾರ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಲ್ಲದೆ, ಕ್ಷಯರೋಗ (ಟಿಬಿ)ದಿಂದ ಬಳಲುತ್ತಿದ್ದ ಪವನಕುಮಾರನನ್ನು ಕೀಳಾಗಿ ಕಾಣುತ್ತಿದ್ದರು. ಊಟ ಮಾಡುವ ವೇಳೆ ತಟ್ಟೆಯಲ್ಲಿ ಉಗುಳುವುದು, ನೀರು ಸುರಿಯುವುದು, ಗಂಜಿಯನ್ನು ಚೆಲ್ಲುವುದು ಸೇರಿದಂತೆ ವಿವಿಧ ರೀತಿಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು. ಈ ನಿರಂತರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಜಿಲ್ಲಾ ಕಾರಾಗೃಹ ಅಧಿಕಾರಿಯವರು ನೀಡಿದ ದೂರಿನ ಮೇರೆಗೆ ಪ್ರಭಾಕರರೆಡ್ಡಿ, ವಿನಯರೆಡ್ಡಿ, ಮಹೇಶ ರಾಳಲದೊಡ್ಡಿ, ಶಿವರಾಜ ಸಿರವಾರ ಸೇರಿದಂತೆ ಒಟ್ಟು ಆರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 108, 54, 352 ಹಾಗೂ 3(5)ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ
ನಗರದಲ್ಲಿ ನಡೆದ ಘರ್ಷಣೆ ಪ್ರಕರಣದಲ್ಲಿ ಬಂಧಿತರಾಗಿ ವಿಚಾರಣ ದೀನ ಕೈದಿಗಳು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಸಹ ಕೈದಿಗೆ ಕಿರುಕುಳ ನೀಡಿದ್ದರಿಂದ ಮತ್ತೊಂದು ಪ್ರಕರಣ ಎದುರಿಸುವಂತಾಗಿದೆ.




