ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ (ಜೆಪಿಎಸ್ಸಿ) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ 12 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳು, ಕೊನೆಗೂ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಮ್ಮತಿಸಿದ್ದಾರೆ.
ಸರ್ಕಾರದೊಂದಿಗೆ ಚರ್ಚಿಸಲು ವಿದ್ಯಾರ್ಥಿಗಳ ಕೋರ್ ಕಮಿಟಿಯು 8 ಸದಸ್ಯರ ಪ್ರಮುಖ ನಿಯೋಗವನ್ನು ರಚಿಸಿದೆ. ರವೀಂದ್ರ ಪಾಸ್ವಾನ್, ಪಿಯೂಷ್ ಕುಮಾರ್ ಸಿಂಗ್, ರವೀಂದ್ರ ಕುಮಾರ್ ರವಿ, ರಾಜೇಶ್ ಪ್ರಸಾದ್, ನೀತು ಕುಜೂರ್, ಕಾರ್ತಿಕ್ ಸೊರೇನ್, ಅಂಕಿತ್ ಕುಮಾರ್ ಮತ್ತು ಶಾಲು ಸಿಂಗ್ ಈ ನಿಯೋಗದಲ್ಲಿರಲಿದ್ದಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಹಿರಿಯ ವಕೀಲ ಅಜಿತ್ ಕುಮಾರ್ ಹಾಗೂ ಪತ್ರಕರ್ತರಾದ ಶಂಭುನಾಥ್ ಚೌಧರಿ ಮತ್ತು ವಿಕಾಸ್ ವರ್ಮಾ ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್, ದೆಹಲಿ ಎಲ್ಲೇ ಆದರೂ, ಕಾಂಗ್ರೆಸ್ ವಿದ್ಯಾರ್ಥಿಗಳ ಪರ: ಮಲ್ಲಿಕಾರ್ಜುನ ಖರ್ಗೆ
ಮಾತುಕತೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ವಿದ್ಯಾರ್ಥಿ ಮುಖಂಡ ಪಿಯೂಷ್ ಕುಮಾರ್ ಸಿಂಗ್, “ಜತೆಯಲ್ಲಿ ಬರುವ ಪತ್ರಕರ್ತರು ಮತ್ತು ಕಾನೂನು ತಜ್ಞರು ಕೇವಲ ಪೋಷಕರ ಅಥವಾ ಮಾರ್ಗದರ್ಶಕರ ಸ್ಥಾನದಲ್ಲಿರಲಿದ್ದಾರೆ. ಸರ್ಕಾರದ ಮುಂದೆ ಎಲ್ಲ ವಿಷಯಗಳು, ಸಾಕ್ಷ್ಯಗಳು ಮತ್ತು ಬೇಡಿಕೆಗಳನ್ನು ವಿದ್ಯಾರ್ಥಿ ಪ್ರತಿನಿಧಿಗಳು ಮಾತ್ರವೇ ಮಂಡಿಸಲಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಸಭೆಯ ಒಳಗೆ ಕ್ಯಾಮೆರಾ, ಮೈಕ್ ಅಥವಾ ಯಾವುದೇ ರೆಕಾರ್ಡಿಂಗ್ ಸಾಧನಗಳನ್ನು ಒಯ್ಯಲು ಅವಕಾಶವಿರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ 12ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಜಾಗೃತಗೊಂಡ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ, ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆಯ ಬಾಗಿಲು ತೆರೆದಿರುವುದಾಗಿ ತಿಳಿಸಿತ್ತು. ಉಪ ವಿಭಾಗಾಧಿಕಾರಿ (ಎಸ್ಡಿಒ) ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅವರು ಜೈಪಾಲ್ ಸಿಂಗ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಸಿಎಂ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಅಧಿಕೃತ ಆಹ್ವಾನ ನೀಡಿದ್ದರು.
ಆರಂಭದಲ್ಲಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದ ವಿದ್ಯಾರ್ಥಿಗಳು, “ಇದು ಕೇವಲ ಕೆಲವರ ಹೋರಾಟವಲ್ಲ, ರಾಜ್ಯದ ಸಮಸ್ತ ಅಭ್ಯರ್ಥಿಗಳ ಧ್ವನಿ. ಪಾರದರ್ಶಕತೆಗಾಗಿ ಮುಖ್ಯಮಂತ್ರಿಗಳೇ ಕ್ರೀಡಾಂಗಣಕ್ಕೆ ಬಂದು ಬಹಿರಂಗವಾಗಿ ಮಾತುಕತೆ ನಡೆಸಬೇಕು” ಎಂದು ಪಟ್ಟು ಹಿಡಿದಿದ್ದರು. ಆದರೆ, ಬುಧವಾರ ತಡರಾತ್ರಿ ಸುದೀರ್ಘ ಚರ್ಚೆಯ ನಂತರ, ಆಡಳಿತ ಮಂಡಳಿ ಸೂಚಿಸಿದ ಸ್ಥಳದಲ್ಲೇ ಮಾತುಕತೆ ನಡೆಸಲು ವಿದ್ಯಾರ್ಥಿ ಸಮಿತಿ ಅಂತಿಮವಾಗಿ ಒಪ್ಪಿಗೆ ಸೂಚಿಸಿದೆ. ಇವೆಲ್ಲವುದರ ನಡುವೆ ಜಾರ್ಖಂಡ್ ಸರ್ಕಾರದ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದೆ.




