ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಅವರ ನೇತೃತ್ವದಲ್ಲಿ ಮಂಗಳವಾರ ನಡೆಸಿ ಎನ್.ಎ.ನಾಗರಾಜು ತಾಲ್ಲೂಕು ಸಂಚಾಲಕರಾಗಿ ಸರ್ವ ಸದಸ್ಯರ ಸಮ್ಮತಿಯಲ್ಲಿ ಆಯ್ಕೆ ಮಾಡಲಾಯಿತು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಸಮಿತಿಯ ತಾಲ್ಲೂಕು ಖಜಾಂಚಿಯಾಗಿ ಎಚ್.ಬಸವರಾಜು ಹಾಗೂ ನಿಟ್ಟೂರು ಹೋಬಳಿ ಸಂಚಾಲಕರಾಗಿ ನಿಟ್ಟೂರು ಕೃಷ್ಣಮೂರ್ತಿ, ಕಸಬ ಹೋಬಳಿ ಸಂಚಾಲಕರಾಗಿ ಗೋವಿಂದಪ್ಪ, ಕಡಬ ಹೋಬಳಿ ಸಂಚಾಲಕರಾಗಿ ಸುರೇಶ್, ಚೇಳೂರು ಹೋಬಳಿ ಸಂಚಾಲಕರಾಗಿ ಜಗದೀಶ್, ಹಾಗಲವಾಡಿ ಹೋಬಳಿ ಸಂಚಾಲಕರಾಗಿ ಲಕ್ಷ್ಮಣ್ ಹಾಗೂ ಸಿ.ಎಸ್.ಪುರ ಹೋಬಳಿ ಸಂಚಾಲಕರಾಗಿ ಅಭಿಷೇಕ ಹಾಗೂ ನಗರ ಘಟಕದ ಸಂಚಾಲಕರಾಗಿ ರಾಘವೇಂದ್ರ, ಮಂಜುನಾಥ್, ಯೋಗೀಶ್ ಇವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ನೇಮಿಸಲಾಯಿತು.
ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ ಸಾಮಾಜಿಕ ನ್ಯಾಯ ಎತ್ತಿಹಿಡಿಯುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ನೂತನ ಮುಖ್ಯಮಂತ್ರಿಗಳು ಮುಂದಾಗಬೇಕು. ಪಾಂಡು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಸಚಿವ ಸ್ಥಾನ ಹಂಚಿಕೆ ಮಾಡಬೇಡಿ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ದಲಿತರಿಗೂ ಅವಕಾಶ ಒದಗಿಸಬೇಕಿದೆ. ಸ್ವಾಂತಂತ್ರ್ಯ ಬಂದು 76 ವರ್ಷ ಕಳೆದರೂ ದಲಿತ ಸಿಎಂ ಈಡೇರಿಲ್ಲ. ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಡಿಸಿಎಂ ಪಟ್ಟ ನೀಡಿ ಕಂದಾಯ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ ಸ್ಥಾನ ನೀಡಲಾಗಿದೆ. ಪ್ರಿಯಾಂಕ ಖರ್ಗೆ ಅವರಿಗೆ ಗೃಹ ಖಾತೆ ಜೊತೆ ಐಟಿಬಿಟಿ ನೀಡಲಾಗಿದೆ. ಆದರೆ 50 ವರ್ಷ ಅನುಭವದ ರಾಜಕಾರಣಿ ಕೆ.ಎಚ್.ಮುನಿಯಪ್ಪ ಅವರಿಗೆ ಆಹಾರ ಖಾತೆ ಮುಂದುವರೆಸಿ ಅಷ್ಟಕ್ಕೇ ತೃಪ್ತಿ ಪಡಿಸುವ ಕೆಲಸ ಮಾಡಬೇಡಿ. ಅವರ ಅಗಾಧ ಅನುಭವಕ್ಕೆ ಡಿಸಿಎಂ ಹುದ್ದೆ ಜೊತೆ ಸಮಾಜ ಕಲ್ಯಾಣ ಇಲಾಖೆ ನೀಡಬೇಕು. ತಳ ಸಮುದಾಯದ ಕಷ್ಟ ತಿಳಿದ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಕೊಟ್ಟು ಮಾದಿಗ ಸಮುದಾಯ ಹಾಗೂ ಸಂಬಂಧಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ನೂತನ ಸರ್ಕಾರಕ್ಕೆ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ನೂತನ ತಾಲ್ಲೂಕು ಸಂಚಾಲಕ ಎನ್.ಎ.ನಾಗರಾಜು ಮಾತನಾಡಿ ತಾಲ್ಲೂಕಿನ ದಲಿತ ಪರ ಕೆಲಸ ಮಾಡಿ ಸಾಮಾಜಿಕ ಬದ್ಧತೆಗಾಗಿ ಹೋರಾಟ ಮಾಡುತ್ತೇನೆ. ಸಮಿತಿಯ ಮೂಲಕ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಅರ್ಹರಿಗೆ ಒದಗಿಸಿ ನಮ್ಮ ದಲಿತರನ್ನು ಮುಖ್ಯವಾಹಿನಿಗೆ ತರುವ ಕೆಲಸ ಎಲ್ಲಾ ಪದಾಧಿಕಾರಿಗಳು, ಸದಸ್ಯರೊಟ್ಟಿಗೆ ಒಗ್ಗೂಡಿ ಶ್ರಮಿಸುತ್ತೇನೆ ಎಂದ ಅವರು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಧ್ಯೇಯೋದ್ದೇಶದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ದಸಂಸ ರಾಜ್ಯ ಖಜಾಂಚಿ ಕಾಟ್ಕೆ, ರಾಜ್ಯ ಸಂಘಟನಾ ಸಂಚಾಲಕ ನಾಗಮಂಗಲ ವೆಂಕಟೇಶ್, ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಅರಿವೇಸಂದ್ರ ಕೃಷ್ಣಪ್ಪ, ಜಿಲ್ಲಾ ಖಜಾಂಚಿ ಬೆಟ್ಟಸ್ವಾಮಿ, ಮಹಿಳಾ ಸಂಚಾಲಕಿ ತುರುವೇಕೆರೆ ನಂದಿನಿ, ತಿಪಟೂರು ಸುರೇಶ್, ಸುಧಾಕರ್, ಪಾವಗಡ ನರಸಿಂಹಪ್ಪ, ಮುಖಂಡರಾದ ನಿಟ್ಟೂರು ಗಂಗಾರಾಮ್, ನರೇಂದ್ರಕುಮಾರ್, ಹೊಸಕೆರೆ ಬಸವರಾಜು, ನರಸಿಂಹಮೂರ್ತಿ ದಲಿತ್ ಗಂಗಣ್ಣ ಇನ್ನಿತರರು ಇದ್ದರು.




