ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜೀವನದಲ್ಲಿ ಕೌಟುಂಬಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ. ಕೃಷ್ಣ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬೂರಿನಲ್ಲಿ ತುಮಕೂರು ಸಂಶೋಧಕರ ತಂಡ, ಇತಿಹಾಸ ಸಂಕಲನ ಸಮಿತಿ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ಎಎಸ್ಐ ಹಾಗೂ ಯುನೆಸ್ಕೋ ಪಾತ್ರವನ್ನು ವಿವರಿಸಿದರು. ಕರ್ನಾಟಕದ ವಿಶ್ವ ಪಾರಂಪರಿಕ ತಾಣಗಳು, ಶಾಸನಗಳು ಹಾಗೂ ಮಸ್ಕಿ ಶಾಸನ, ಹೊನ್ನೇನಹಳ್ಳಿ ಕೃಷ್ಣದೇವರಾಯನ ಮರಣ ಶಾಸನ ಸೇರಿದಂತೆ ವಿವಿಧ ಐತಿಹಾಸಿಕ ದಾಖಲೆಗಳ ಮಹತ್ವವನ್ನು ತಿಳಿಸಿದರು. ಹೆಬ್ಬೂರಿನ ಸ್ಥಳೀಯ ಚರಿತ್ರೆ, ಸ್ಮಾರಕಗಳು ಹಾಗೂ ಜನಪದ ಸಂಸ್ಕೃತಿಯ ಕುರಿತು ಜನರಲ್ಲಿ ಐತಿಹಾಸಿಕ ಜಾಗೃತಿ ಮೂಡಿಸಬೇಕು ಎಂದರು.
ಡಾ. ಶ್ರೀನಿವಾಸ ಎ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ನೈಸರ್ಗಿಕ, ಕೃಷಿಕ, ಆಹಾರ ಹಾಗೂ ಸಾಮಾಜಿಕ ಪರಂಪರೆಗಳೊಂದಿಗೆ ಅವುಗಳಲ್ಲಿರುವ ಮಾನವೀಯ ಮತ್ತು ಕೌಟುಂಬಿಕ ಮೌಲ್ಯಗಳ ಮಹತ್ವವನ್ನು ವಿವರಿಸಿದರು.
ವೀರಗಲ್ಲು, ದೇವಾಲಯ ಹಾಗೂ ಸತೀಕಲ್ಲುಗಳಂತಹ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ಪ್ರಾಂಶುಪಾಲ ಡಿ. ಕೃಷ್ಣ ಹೇಳಿದರು.
ಕಾರ್ಯಕ್ರಮವನ್ನು ಕುಮಾರ್ ಜಿ.ಸಿ. ಆಯೋಜಿಸಿದ್ದರು. ಡಾ. ಮೋಹನ್ ಕುಮಾರ್, ಡಾ. ರವೀಶ್, ವರದರಾಜು, ಡಾ. ಶಿಲ್ಪಶ್ರೀ ಹಾಗೂ ಡಾ. ಓಹಿಲೇಶ್ವರಿ ಉಪಸ್ಥಿತರಿದ್ದರು.




