ಕೆಪಿಎಸ್ಸಿಯಲ್ಲಿ ಸುದ್ದಿಯಾದ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅವ್ಯವಹಾರಗಳು ಹಾಗೂ ವಿಳಂಬಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ. ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ನ್ಯಾಯಸಮ್ಮತವಾಗಿ ನಿರ್ವಹಿಸಬೇಕು. ಪಿಸಿ ಹೋಟಾ ಸಮಿತಿ ವರದಿ ಜಾರಿಗೆ ತರಬೇಕು ಎಂದು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಹೇಳಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆಪಿಎಸ್ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ಎಐಡಿವೈಓ ಯುವಜನ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲಕ್ಷಾಂತರ ಯುವಜನರ ಕನಸುಗಳಿಗೆ ಬೆಳಕಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇಂದು ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಅಕ್ರಮಗಳಿಂದ ಪ್ರಶ್ನಾರ್ಹವಾಗಿದೆ. ಪ್ರತಿ ಹಗರಣವೂ ಸಾವಿರಾರು ಯುವಜನರ ಶ್ರಮ, ಸಮಯ ಮತ್ತು ಭವಿಷ್ಯದ ಮೇಲೆ ಹೊಡೆತ ನೀಡಿದೆ. ಅರ್ಹತೆಗಿಂತ ಹಣ, ಪ್ರಭಾವ ಮತ್ತು ಲಂಚ ನೀಡಿದವರಿಗೆ ಉದ್ಯೋಗಾವಕಾಶ ಸಿಗುತ್ತಿದೆ ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ. ಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳು ಕೇವಲ ಕೆಲವೇ ಅಭ್ಯರ್ಥಿಗಳ ಸಮಸ್ಯೆಯಲ್ಲ; ಅದು ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯದ ಪ್ರಶ್ನೆಯಾಗಿದೆ.
ಈ ಪರಿಸ್ಥಿತಿಗೆ ತೆರೆ ಬೀಳಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದು, ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಜನರ ವಿಶ್ವಾಸ ಗಳಿಸುವ ರೀತಿಯಲ್ಲಿ ರೂಪಿಸಬೇಕು. ಆದ್ದರಿಂದ ಕೆಪಿಎಸ್ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗಾಕಾಂಕ್ಷಿಗಳಾದ ನವೀನ ಹಾಗೂ ಭಾಗ್ಯಶ್ರೀ ಅವರು ಮಾತನಾಡಿ, “ಸರ್ಕಾರ ಭ್ರಷ್ಟಾಚಾರ ತಡೆಗಟ್ಟದಿದ್ದರೆ, ಪ್ರತಿ ಹುದ್ದೆಗೆ ಇಂತಿಷ್ಟು ಎಂದು ದರವನ್ನು ನಿಗದಿ ಮಾಡಲಿ. ಆಗ ನಾವು ಕಷ್ಟಪಟ್ಟು ಓದುವುದೂ ತಪ್ಪುತ್ತದೆ. ಅವರ ಅಯೋಗ್ಯತೆಯು ಬಹಿರಂಗವಾಗುತ್ತದೆ. ನಮ್ಮ ಅರ್ಹತೆಗೆ ತಕ್ಕ ಒಂದು ಉದ್ಯೋಗ ಕೊಡಲು ಆಗದವರಿಗೆ ಮಂತ್ರಿಗಳಾಗಲು ಯಾವ ಅರ್ಹತೆ ಇದೆ?” ಎಂದು ಪ್ರಶ್ನಿಸಿದರು.
ಎಐಡಿವೈಓನ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಕೊಂಡಗೂಳಿ, ಜಂಟಿ ಕಾರ್ಯದರ್ಶಿ ಆಶೋಕ ದೇಸಾಯಿ ಹಾಗೂ ಉದ್ಯೋಗಾಕಾಂಕ್ಷಿಗಳಾದ ಕಲ್ಯಾಣಿ, ಐಶ್ವರ್ಯ, ಭಾಗ್ಯಾ, ಸೃಷ್ಟಿ, ಕೋಮಲ, ರೋಹನ್, ಮುತ್ತು, ಮಲ್ಲು, ಮೇಘರಾಜ ಅವರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.




