ರಾಯಚೂರು ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ದಲಿತ ಕೊಲೆ ಪ್ರಕರಣಗಳನ್ನು ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಬೇಕು ಹಾಗೂ ಪ್ರಕರಣಗಳಲ್ಲಿನ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಅವರ ಕೊಲೆ, ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಅವರ ಅತ್ಯಾಚಾರ ಮತ್ತು ಕೊಲೆ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದರು ಸಿಬಿಐ ತನಿಖೆಗೆ ವಹಿಸಿಲ್ಲ ಎಂದು ಆಕ್ರೋಶಿಸಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಭೂಮಾನಂದ, ಅಶ್ವಿನಿ ಮತ್ತು ರಾಣೆಮ್ಮ ಅವರ ಪ್ರಕರಣಗಳನ್ನು ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಬೇಕು. ಭೂಮಾನಂದ ಕೊಲೆ ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ಭೀಮರಾಯ ಹದ್ದಿನಾಳ ಅವರನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕೌಂಟರ್ ಪ್ರಕರಣಗಳನ್ನು ದಾಖಲಿಸುವುದನ್ನು ತಕ್ಷಣ ನಿಲ್ಲಿಸಬೇಕು. ರಾಯಚೂರು ಜಿಲ್ಲೆಯ ದೇವದುರ್ಗ, ಸಿರವಾರ ಹಾಗೂ ಮಾನವಿ ತಾಲೂಕುಗಳಲ್ಲಿ ದಲಿತ ಮುಂಚೂಣಿ ಹೋರಾಟಗಾರರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಭದ್ರತೆ ನೀಡಲು ಸಾಧ್ಯವಾಗದಿದ್ದಲ್ಲಿ ತಮ್ಮ ಪ್ರಾಣ ರಕ್ಷಣೆಗಾಗಿ ಶಸ್ತ್ರಾಸ್ತ್ರ ಹೊಂದಲು ಪರವಾ ನಗಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ದಲಿತರು ತಮ್ಮ ಪ್ರಾಣ ರಕ್ಷಣೆಗಾಗಿ ಪ್ರತ್ಯೇಕ ರೆಜಿಮೆಂಟ್ ಸ್ಥಾಪಿಸಿಕೊಳ್ಳಲು ಸರ್ಕಾರ ಅನುಮತಿ ನೀಡಬೇಕು ಹಾಗೂ ರಾಯಚೂರು ಜಿಲ್ಲೆಯನ್ನು ದೌರ್ಜನ್ಯಕ್ಕೆ ತುತ್ತಾಗುವ ಜಿಲ್ಲೆಯೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲೆಯವರೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಅಪೌಷ್ಟಿಕತೆಯ ನೆರಳಲ್ಲಿ ಕಲ್ಯಾಣ ಕರ್ನಾಟಕ; ರಾಯಚೂರಿನ ಶೇ. 49.5 ಮಕ್ಕಳಲ್ಲಿ ಪೋಷಕಾಂಶದ ಕೊರತೆ
ಪ್ರತಿಭಟನೆಯಲ್ಲಿ ಎಸ್. ಮಾರಪ್ಪ ವಕೀಲ, ರವೀಂದ್ರನಾಥ ಪಟ್ಟಿ, ಜೈಭೀಮ್ ವಲ್ಲಭ, ದುಳ್ಳಯ್ಯ ದಂಡೋರ, ಕೆ.ಜಿ. ವೀರೇಶ, ನರಸಿಂಹಲು ಮರ್ಚೆಟ್ ಹಾಳ, ನರಸಪ್ಪ ಅಕ್ಕರಕಿ, ದಂಡೋರಾ, ನರಸಿಂಹಲು ನೆಲಹಾಳ, ಎಂ. ಈರಣ್ಣ, ಹೇಮರಾಜ್ ಅಸ್ಕಿಹಾಳ, ಆಂಜನೇಯ ಕುರುಬದೊಡ್ಡಿ, ಆಂಜನೇಯ ಉಟ್ಟೂರು, ಶರಣಪ್ಪ ದಿನ್ನಿ, ಶ್ರೀನಿವಾಸ ಕಲವಲದೊಡ್ಡಿ, ಅಮರೇಗೌಡ, ಹುಲಿಗೆಪ್ಪ, ವಿಶ್ವನಾಥ ಪಟ್ಟಿ, ಎಂ.ಆರ್. ಭೇರಿ, ಶ್ರೀನಿವಾಸ ಕೊಪ್ಪರ, ರಾಂಪೂರು ನಾಗರಾಜ, ಎಸ್.ಕೆ. ಕೃಷ್ಣ ಹಾಗೂ ತಾಯಪ್ಪ ಗಧಾರ ಸೇರಿದಂತೆ ಹಲವರು ಭಾಗವಹಿಸಿದ್ದರು.




