ವಿಧಾನಸಭಾ ಚುನಾವಣೆ ಮುಗಿದಿದೆ. ಬಿಜೆಪಿ-ಜೆಡಿಎಸ್ ಹೀನಾಯ ಸೋಲು ಕಂಡಿವೆ. ಇದೀಗ, ಎಲ್ಲ ಪ್ರಮುಖ ಪಕ್ಷಗಳು ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿವೆ.
ಒಕ್ಕಲಿಗರ ಬಾಹುಳ್ಯವಿರುವ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹೀನಾಯ ಸೋಲು ಕಂಡಿದೆ. ಅದರಲ್ಲೂ ಜೆಡಿಎಸ್ನ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ, ಒಂದನ್ನಷ್ಟೇ ಜೆಡಿಎಸ್ ಗೆದ್ದಿದೆ. ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ಅನ್ನು ಮಣಿಸಲು ಜೆಡಿಎಸ್ ತಂತ್ರ ರೂಪಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಸೋಲುಂಡಿದ್ದರೂ, ತನ್ನ ಮತಗಳನ್ನು ಹೆಚ್ಚಾಗಿ ಕಳೆದುಕೊಂಡಿಲ್ಲ. ಜಿಲ್ಲೆಯಲ್ಲಿ ಒಟ್ಟು 13,06,063 ಮತದಾರರಿದ್ದು, ಜೆಡಿಎಸ್ 37.57% ಮತಗಳನ್ನು ಪಡೆದಿದೆ. ಹಾಗೆ ನೋಡಿದರೆ, ಕಾಂಗ್ರೆಸ್ 36.47% ಮತಗಳನ್ನು ಪಡೆದಿದೆ. ಹೀಗಾಗಿ, ಜಿಲ್ಲೆಯಲ್ಲಿ ಮತ್ತೆ ಪುಟಿದೇಳಲು ಜೆಡಿಎಸ್ ಹವಣಿಸುತ್ತಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಎಲ್ಲ ಏಳು ಸ್ಥಾನಗಳನ್ನು ಗೆದ್ದಿತ್ತು. ನಂತರ, 41 ಜಿಲ್ಲಾ ಪಂಚಾಯತಿ ಸ್ಥಾನಗಳ ಪೈಕಿ 26 ಸ್ಥಾನಗಳನ್ನು ಗೆದ್ದು ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಜಿಲ್ಲೆಯ ಎಲ್ಲ ಏಳು ತಾಲ್ಲೂಕು ಪಂಚಾಯಿತಿಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಆದರೆ, ಈ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ ಕಂಡಿರುವ ಪಕ್ಷವು, ಮುಂದಿನ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶ್ರಮಿಸುತ್ತಿದೆ.
“ನಾವು ಸಾಧ್ಯವಾದಷ್ಟು ಬೇಗ ಅಭ್ಯರ್ಥಿಗಳನ್ನು ಘೋಷಿಸಲು ಪಕ್ಷದ ಹೈಕಮಾಂಡ್ಗೆ ಕೇಳಿಕೊಂಡಿದ್ದೇವೆ. ಇದರಿಂದ, ತ್ವರಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ಜಿಲ್ಲೆಯಲ್ಲಿ ಪಕ್ಷ ತನ್ನ ನೆಲೆಯನ್ನು ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕು” ಎಂದು ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಹೇಳಿದ್ದಾರೆ.
ಏತನ್ಮಧ್ಯೆ, ಕಳೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕೇವಲ 14 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆದ್ದು, ಜೆಡಿಎಸ್ಅನ್ನು ಅಧಿಕಾರದಿಂದ ಕೆಳಗಿಳಿಸಿ, ಜಿಲ್ಲೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಹವಣಿಸುತ್ತಿದೆ.
“ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ನಮ್ಮ ಎಲ್ಲ ಅಭ್ಯರ್ಥಿಗಳು ಗೆಲ್ಲಿಸಿಕೊಳ್ಳುವುದು ಪಕ್ಷದ ಮುಂದಿನ ಗುರಿಯಾಗಿದೆ. ವಿಧಾನಸಭೆ ಫಲಿತಾಂಶ ಪ್ರಕಟವಾದ ನಂತರದ ದಿನದಿಂದಲೇ ನಾವು ಸ್ಥಳೀಯ ಆಡಳಿತಗಳ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ” ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಟ್ವಿಟರ್ನಲ್ಲಿ ಮೋದಿ ಗೋ ಬ್ಯಾಕ್ ಟ್ರೆಂಡಿಂಗ್!
ಈ ನಡುವೆ, ಜಿಲ್ಲೆಯಲ್ಲಿ ಬಿಜೆಪಿಯ ಪರಿಸ್ಥಿತಿ ಏನೆಂದು ಹಲವರು ನೋಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಡೆ 13.74% ಮತಗಳನ್ನು ಪಡೆದಿದೆ. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ಮತ ಗಳಿಕೆಯ ಪ್ರಮಾಣವನ್ನು ಹೆಚ್ಚಿಕೊಂಡಿದೆ. ಸ್ಥಳೀಯ ಆಡಳಿತಗಳ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.
ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ಒಟ್ಟು 41 ಸ್ಥಾನಗಳಿವೆ. ಆ ಪೈಕಿ, ಮಂಡ್ಯ, ಮದ್ದೂರು ಮತ್ತು ಮಳವಳ್ಳಿ ತಾಲೂಕಿನಲ್ಲಿ ತಲಾ ಏಳು, ಕೆಆರ್ ಪೇಟೆಯಲ್ಲಿ ಆರು, ಪಾಂಡವಪುರದಲ್ಲಿ ಐದು ಹಾಗೂ ನಾಗಮಂಗಲ ಮತ್ತು ಶ್ರೀರಂಗಪಟ್ಟಣದಲ್ಲಿ ತಲಾ ನಾಲ್ಕು ಸ್ಥಾನಗಳಿವೆ.
ಇನ್ನು, ತಾಲೂಕು ಪಂಚಾಯತಿಗಳ ಪೈಕಿ, ಮಂಡ್ಯದಲ್ಲಿ 24, ಮದ್ದೂರಿನಲ್ಲಿ 23, ಮಳವಳ್ಳಿಯಲ್ಲಿ 21, ಕೆಆರ್ ಪೇಟೆಯಲ್ಲಿ 20, ಪಾಂಡವಪುರದಲ್ಲಿ 17 ಮತ್ತು ನಾಗಮಂಗಲ ಮತ್ತು ಶ್ರೀರಂಗಪಟ್ಟಣದಲ್ಲಿ ತಲಾ 16 ಸ್ಥಾನಗಳನ್ನು ಒಳಗೊಂಡಂತೆ 137 ಸ್ಥಾನಗಳಿವೆ. ತಾಲೂಕುಗಳ ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷಗಳು ಪೈಪೋಟಿ ನಡೆಸಲಿವೆ.