ಸ್ವಯಂಘೋಷಿತ ದೇವಮಾನವ ಸೇರಿದಂತೆ ಮೂವರು ಸೇರಿ ಆಂಧ್ರ ಪ್ರದೇಶದ ಮಹಿಳೆಯೊಬ್ಬರಿಗೆ ಸುಮಾರು 2.5 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ನಿವಾಸಿ ಎಂ. ಕುಮುದಾ ನೀಡಿದ ದೂರಿನ ಮೇರೆಗೆ, ಸಿಸಿಬಿ ಪೊಲೀಸರು ಸ್ವಯಂಘೋಷಿತ ದೇವಮಾನವ ಅಫ್ಸರ್ ಪಾಷಾ, ಶಂಕರ್ ಹಾಗೂ ಭರತ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ತಮ್ಮ ಪತಿ, ಅತ್ತೆ ಹಾಗೂ ಭಾವನಿಗೆ ಸೇರಿದ ಚಾಮರಾಜಪೇಟೆಯ ಆಸ್ತಿಯನ್ನು ಅಡಮಾನವಿಟ್ಟು ಬ್ಯಾಂಕ್ನಿಂದ ಸಾಲ ಪಡೆಯಲು ಕುಮುದಾ 2022ರಲ್ಲಿ ಪ್ರಯತ್ನಿಸುತ್ತಿದ್ದರು. ಇದೇ ವೇಳೆ ಸ್ನೇಹಿತರೊಬ್ಬರ ಮೂಲಕ ಭರತ್ ಮತ್ತು ಶಂಕರ್ ಪರಿಚಯವಾಗಿದ್ದು, ಅವರು ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಇಬ್ಬರೂ ಆಗಾಗ ಕುಮುದಾ ಅವರ ಮನೆಗೆ ಭೇಟಿ ನೀಡುತ್ತಿದ್ದರು.
2023ರ ನವೆಂಬರ್ನಲ್ಲಿ ಕುಮುದಾ ಅವರ ಮಗ ಅಪಘಾತಕ್ಕೀಡಾದ ಬಳಿಕ, ಮನೆಯಲ್ಲಿನ “ನಕಾರಾತ್ಮಕ ಶಕ್ತಿ”ಯಿಂದಲೇ ಈ ಘಟನೆ ನಡೆದಿದೆ ಎಂದು ಭರತ್ ಹೇಳಿದ್ದಾನೆ. ಸಮಸ್ಯೆಗಳನ್ನು ಪರಿಹರಿಸಬಲ್ಲ ವ್ಯಕ್ತಿ ಎಂದು ಹೇಳಿ ಸ್ವಯಂಘೋಷಿತ ದೇವಮಾನವ ಅಫ್ಸರ್ ಪಾಷಾನನ್ನು ಪರಿಚಯಿಸಿದ್ದಾನೆ. ಅಫ್ಸರ್ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಸುಮಾರು 8 ಲಕ್ಷ ರೂ. ಪಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಾದ ಬಳಿಕ ಮನೆ ಮಾರಾಟ ಅಥವಾ ಬ್ಯಾಂಕ್ ಸಾಲದ ಕುರಿತು ಕುಮುದಾ ಚರ್ಚಿಸಿದಾಗ, ತಮಗೆ ಭಾರತೀಯ ರಿಸರ್ವ್ ಬ್ಯಾಂಕ್ನಿಂದ (ಆರ್ಬಿಐ) 505 ಕೋಟಿ ರೂ. ಬರಬೇಕಿದೆ ಎಂದು ಅಫ್ಸರ್ ಹೇಳಿದ್ದಾನೆ ಎನ್ನಲಾಗಿದೆ. ಮನೆ ಮಾರಾಟ ಮಾಡಿ 2.5 ಕೋಟಿ ರೂ. ನೀಡಿದರೆ, ಆರ್ಬಿಐಯಿಂದ ಹಣ ಬಂದ ಬಳಿಕ 10 ಕೋಟಿ ರೂ. ಹಿಂದಿರುಗಿಸುವುದಾಗಿ ವಾಟ್ಸಾಪ್ ಸಂದೇಶಗಳ ಮೂಲಕ ಭರವಸೆ ನೀಡಿದ್ದಾನೆ ಎಂದು ಕುಮುದಾ ಆರೋಪಿಸಿದ್ದಾರೆ.
ಆರ್ಬಿಐ ನೀಡಿದೆ ಎಂದು ಹೇಳಲಾದ ಪ್ರಮಾಣಪತ್ರ ಹಾಗೂ ಅದರಲ್ಲಿ ಅಫ್ಸರ್ನ ಫೋಟೋ ಇರುವ ದಾಖಲೆಗಳನ್ನು ನಂಬಿದ ಕುಮುದಾ, ತಮ್ಮ ಮನೆಯನ್ನು 8.5 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಬಳಿಕ ಸುಮಾರು 2.5 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನವನ್ನು ಹಂತ ಹಂತವಾಗಿ ಅಫ್ಸರ್ಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹಬ್ಬದ ಸೀಸನ್ಗೆ ಬೆಲೆ ಏರಿಕೆ ಶಾಕ್! ಟೂತ್ಪೇಸ್ಟ್ನಿಂದ ಪೇಂಟ್ವರೆಗೆ ಹಲವು ವಸ್ತುಗಳು ದುಬಾರಿ
ಆದರೆ ಭರವಸೆ ನೀಡಿದಂತೆ ಹಣವನ್ನು ಹಿಂದಿರುಗಿಸದ ಅಫ್ಸರ್ನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಈ ಕುರಿತು ಶಂಕರ್ ಮತ್ತು ಭರತ್ ಅವರನ್ನು ಸಂಪರ್ಕಿಸಿದರೂ ಸ್ಪಂದಿಸಿಲ್ಲ ಎಂದು ಕುಮುದಾ ಆರೋಪಿಸಿದ್ದಾರೆ. ಅಲ್ಲದೆ, ಹಣ ಕೇಳಿದಾಗ ಅಫ್ಸರ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ಆರೋಪಿಗಳಾದ ಅಫ್ಸರ್ ಪಾಷಾ, ಶಂಕರ್ ಹಾಗೂ ಭರತ್ ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ




