- ಮೀಸಲಾತಿಯ ಮೂಲಕ ಲಿಂಗಾಯತ, ಒಕ್ಕಲಿಗರಿಗೂ ಮಾಡಿದ ವಂಚನೆ ಇದು
- ಮುಸ್ಲಿಮರನ್ನು ಸಾಮಾಜಿಕವಾಗಿ ಕೆಳ ಹಂತಕ್ಕೆ ದೂಡುವ ಪ್ರಯತ್ನ; ಗುಲ್ಷದ್
ಚುನಾವಣೆ ಬರುತ್ತದೆ ಎನ್ನುವಾಗ ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನವು ಸಾಮಾಜಿಕವಾದದ್ದಲ್ಲ, ರಾಜಕೀಯವಾದದ್ದು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕಾನಾಥ್ ಹೇಳಿದರು.
ಮೀಸಲಾತಿ ಹಂಚಿಕೆ ಅನ್ಯಾಯದ ಕುರಿತಂತೆ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಜನಾಂಗದ ಜಾಗೃತ ವೇದಿಕೆ ಪತ್ರಿಕಾಗೋಷ್ಠಿ ಮಾತನಾಡಿದ ದ್ವಾರಕಾನಾಥ್, ಮುಸ್ಲಿಂ ಜನಾಂಗಕ್ಕೆ ಪ್ರವರ್ಗ 2(ಬಿ) ನಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿಯನ್ನು ತೆಗೆದು ಅವೈಜ್ಞಾನಿಕವಾಗಿ ಸರ್ಕಾರ ಹಂಚಿಕೆ ಮಾಡಿದೆ.
ಧಾರ್ಮಿಕ ಅಲ್ಪಸಂಖ್ಯಾತರು ಎಂದು ಮುಸ್ಲಿಮರಿಗೆ ನೀಡಿದ್ದನ್ನು ತೆಗೆದು ಹಾಕುವುದೇ ಆಗಿದ್ದರೆ, ಅದೇ ಹಿಂದುಳಿದ ಪಟ್ಟಿಯಲ್ಲಿ ಕ್ರೈಸ್ತರು, ಬೌದ್ಧರಿದ್ದಾರೆ. ಹಾಗಾದರೆ ಧಾರ್ಮಿಕ ಅಲ್ಪಸಂಖ್ಯಾತರು ಇಲ್ಲಿ ಮುಸ್ಲಿಮರು ಮಾತ್ರವೇ. ಇದನ್ನು ಎಲ್ಲರೂ ಪ್ರಶ್ನಿಸಬೇಕಾಗಿದೆ ಎಂದು ತಿಳಿಸಿದರು.
ಮುಸ್ಲಿಮರಿಗೆ ನೀಡಲಾಗಿದ್ದ ರಿಸರ್ವೇಷನ್ ಧಾರ್ಮಿಕತೆಯ ಆಧಾರದಲ್ಲಿ ಅಲ್ಲ, ತುಂಬಾ ಹಿಂದುಳಿದ ವರ್ಗ ಎಂಬ ನೆಲೆಯಲ್ಲಿ ನೀಡಿದ್ದು ಎಂಬ ಕನಿಷ್ಠ ಜ್ಞಾನ ಸರ್ಕಾರಕ್ಕೆ ಇರಬೇಕಿತ್ತು.
ಮುಸ್ಲಿಮರ 4 ಶೇಕಡಾವನ್ನು ಲಿಂಗಾಯತ, ಒಕ್ಕಲಿಗರಿಗೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದು ಕೇವಲ ಮುಸ್ಲಿಮರಿಗೆ ಮಾಡಿದ ವಂಚನೆಯಲ್ಲ, ಲಿಂಗಾಯತ, ಒಕ್ಕಲಿಗರಿಗೂ ಮಾಡಿದ ವಂಚನೆ ಎಂದು ದ್ವಾರಕಾನಾಥ್ ಹೇಳಿದರು.
ಬಳಿಕ ಮಾತನಾಡಿದ ಜಾಗೃತ ವೇದಿಕೆಯ ಅಧ್ಯಕ್ಷ ಗುಲ್ಷದ್ ಅಹ್ಮದ್, ಮುಸ್ಲಿಂ ಜನಾಂಗಕ್ಕೆ ಪ್ರವರ್ಗ 2(ಬಿ) ನಲ್ಲಿದ್ದ ಮೀಸಲಾತಿಯನ್ನು ಏಕಪಕ್ಷೀಯವಾಗಿ ರದ್ದುಪಡಿಸಿರುವುದು ನೋವಿನ ಸಂಗತಿ.
ಧರ್ಮದ ಆಧಾರದ ಮೇಲೆ ರಿಸರ್ವೇಷನ್ ಅನ್ನು ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಆಂಧ್ರಪ್ರದೇಶದ ಹೈಕೋರ್ಟಿನಲ್ಲಿ ಮೀಸಲಾತಿಯನ್ನು ರದ್ದುಪಡಿಸಿದೆ ಎಂದು ಆಧಾರವಾಗಿ ಇಟ್ಟುಕೊಂಡಿರುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಆದ್ದರಿಂದ ಪರಿಷ್ಕರಿಸಿದ ರಿಸರ್ವೇಷನ್ ಆದೇಶ ಅಸಿಂಧುವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಈ ಸುದ್ದಿ ಓದಿದ್ದೀರಾ? ತಾಯಿ ಮೇಲೆ ಆಣೆಯಿಟ್ಟ ಬೊಮ್ಮಾಯಿಯಿಂದ ಪಂಚಮಸಾಲಿಗಳಿಗೆ ಮೋಸ; ಸ್ವಾಮೀಜಿಯೇಕೆ ಹೀಗೆ ಮಾಡಿದರು?
ಆಯೋಗಗಳ ವರದಿಗಳನ್ನು ಬದಿಗಿಟ್ಟು, ರಾಜಕೀಯ ದುರುದ್ದೇಶದಿಂದ ಮುಸ್ಲಿಂ ಜನಾಂಗದ ರಿಸರ್ವೇಷನ್ ಅನ್ನುಒಕ್ಕಲಿಗ ಮತ್ತು ಲಿಂಗಾಯತ ಜನಾಂಗಕ್ಕೆ ನೀಡಿರುವುದು ನ್ಯಾಯ ಸಮ್ಮತವಲ್ಲ. ಆದಾಗ್ಯೂ, ಅವರಿಗೆ ಹೆಚ್ಚಾಗಿ ನೀಡಿರುವುದರ ಬಗ್ಗೆ ನಮ್ಮ ಅಭ್ಯಂತರ ಇಲ್ಲ.
ನಮ್ಮ ಜನಸಂಖ್ಯೆ ಮತ್ತು ಸ್ಥಿತಿಗತಿಗಳ ಆಧಾರದ ಮೇಲೆ ನಮಗೆ ಇದ್ದಂತಹ ಪ್ರವರ್ಗ 2(ಬಿ) ಮೀಸಲಾತಿಯನ್ನು ಪುನರ್ ಸ್ಥಾಪಿಸಬೇಕು. ಸಂವಿಧಾನಾತ್ಮಕವಾಗಿ ನಮ್ಮ ಹಕ್ಕನ್ನು ನಮಗೆ ನೀಡುವಂತೆ ಹಕ್ಕೊತ್ತಾಯ ಮಾಡುತ್ತೇವೆ.
ಒಟ್ಟಾರೆಯಾಗಿ, ಮುಸ್ಲಿಮರನ್ನು ಸಾಮಾಜಿಕವಾಗಿ ಕೆಳ ಹಂತಕ್ಕೆ ದೂಡುವ ಪ್ರಯತ್ನ ಈ ರಿಸರ್ವೇಷನ್ ಪರಿಷ್ಕರಣದ ಉದ್ದೇಶ ಹಿಂದೆ ಇದೆ ಎಂದು ಆರೋಪಿಸಿದರು.