- ಜೆಡಿಎಸ್ ಶಾಸಕ ಸ್ಥಾನ ತೊರೆದ ಎ ಟಿ ರಾಮಸ್ವಾಮಿ
- ಎಚ್ಡಿಕೆ ನಡೆ ವಿರುದ್ಧ ಎಟಿಆರ್ ಅಸಮಾಧಾನ ಕಿಡಿ
ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಜೊತೆ ರಾಜೀನಾಮೆ ಪರ್ವ ಆರಂಭವಾಗಿದೆ. ಈ ಪಟ್ಟಿಯಲ್ಲಿ ಜೆಡಿಎಸ್ ಅಗ್ರಸ್ಥಾನದಲ್ಲಿದ್ದು, ಪಕ್ಷ ತೊರೆಯುವವರ ಸಂಖ್ಯೆಯಲ್ಲಿ ಏರಿಕೆ ಕಾಣತೊಡಗಿದೆ.
ಜೆಡಿಎಸ್ ಕಟ್ಟಾಳು ಎಂದೇ ಗುರುತಿಸಿಕೊಂಡಿದ್ದ ಸಜ್ಜನ ರಾಜಕಾರಣಿ ಎ ಟಿ ರಾಮಸ್ವಾಮಿ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನಸೌಧಕ್ಕೆ ತೆರಳಿದ ಅವರು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ನಂತರ ವಿಧಾನಸೌಧ ಮೆಟ್ಟಿಲಿಗೆ ಅವರು ನಮಸ್ಕರಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದ ಎಟಿಆರ್, ಹಲವು ದಿನಗಳಿಂದ ಜೆಡಿಎಸ್ನಿಂದ ದೂರವಿದ್ದರು.
ರಾಜೀನಾಮೆ ಪ್ರಕ್ರಿಯೆ ಮುಗಿಸಿ ಹೊರ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಸ್ವಾಮಿ, ಸಂತೋಷದಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್ಗೆ ಧನ್ಯವಾದ ಹೇಳುತ್ತೇನೆ ಎಂದರು.
ಎಂದಿಗೂ ನಾನು ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ಶಾಸಕನಾಗಿದ್ದಾಗ ಉತ್ತಮ ಕೆಲಸಗಳನ್ನ ಮಾಡಿದ್ದೇನೆ. ನಾನು ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ತಪ್ಪು ಎಂದು ಹೇಳಿಕೊಂಡೇ ಬಂದಿದ್ದೇನೆ. ನಾನು ಎಲ್ಲಿಯೂ ಜೆಡಿಎಸ್ ಬಿಡುತ್ತಿದ್ದೇನೆ ಎಂದು ಹೇಳಿಕೊಂಡಿಲ್ಲ. ಹೇಳಿಯೂ ಇರಲಿಲ್ಲ. ಆದರೆ ಜೆಡಿಎಸ್ನವರೆ ನನ್ನನ್ನು ಹೊರ ಹಾಕಿದ್ರು ಎಂದು ಅವರು ಹೇಳಿದರು.
ಪಕ್ಷದೊಳಗೆ ಹಾಗೂ ಹೊರಗೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು. ಈ ಕಾರಣದಿಂದಲೇ ಪಕ್ಷದ ಪ್ರಮುಖರು ನನ್ನನ್ನ ದೂರ ಇಟ್ಟರು ಎಂದು ರಾಮಸ್ವಾಮಿ ಹೇಳಿಕೊಂಡರು.
ನಾನು ಪಕ್ಷಕ್ಕಾಗಲಿ ಅದರ ನಿಲುವಿಗಾಗಲಿ ಎಂದೂ ದ್ರೋಹ ಬಗೆದಿಲ್ಲ. ದೇವೇಗೌಡರೊಂದಿಗೆ ನನ್ನ ಸಂಬಂಧ ಉತ್ತಮವಾಗಿದೆ. ಆದರೆ ಆಡಳಿತ ನಡೆಸುವವರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಹೀಗಾಗಿ ನಾನು ಪಕ್ಷದಿಂದ ನನ್ನನ್ನು ದೂರ ಇಟ್ಟ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದರು.
ಈ ಸುದ್ದಿ ಓದಿದ್ದೀರಾ? :ಜೆಡಿಎಸ್ ಜಾತಿಗೆಟ್ಟಿದೆ ಎಂದ ಕಾಂಗ್ರೆಸ್ಗೆ ಚಾಟಿ ಬೀಸಿದ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆ ಬಗ್ಗೆ ಅಸಮಾಧಾನ ವ್ತಕ್ತಪಡಿಸಿದ ರಾಮಸ್ವಾಮಿ, ಎಲ್ಲರನ್ನೊಳಗೊಳ್ಳುವ ತತ್ವವನ್ನು ಪಕ್ಷ ಮುನ್ನಡೆಸುವವರು ಸಮರ್ಥವಾಗಿ ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಅದಕ್ಕೂ ಪಕ್ಷಕ್ಕೂ ಉತ್ತಮ ಎಂದರು.
ಅಂತಿಮವಾಗಿ ತಮ್ಮ ಮಂದಿನ ಹೆಜ್ಜೆಗಳ ಬಗ್ಗೆ ಮಾತನಾಡಿದ ರಾಮಸ್ವಾಮಿ, ಚುನಾವಣೆ ರಾಜಕಾರಣ ಮತ್ತು ಮುಂದಿನ ಪಕ್ಷದ ವಿಚಾರವಾಗಿ ನಾನು ಈಗಲೇ ಏನೂ ಹೇಳುವುದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ವಿಷಯ ಹಂಚಿಕೊಳ್ಳುವೆ ಎಂದರು.