- ಎಸ್ಸಿ, ಎಸ್ಟಿ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ಬಗ್ಗೆ ಟೀಕಿಸಿ ಪತ್ರಿಕಾ ಪ್ರಕಟಣೆ
- ಸೋಲಿನ ಭಯದಿಂದ ನಾಚಿಕೆಗೇಡಿನ ತಂತ್ರಕ್ಕೆ ಬೊಮ್ಮಾಯಿ ಮುಂದಾಗಿದ್ದಾರೆ: ಟೀಕೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವುದನ್ನು ಮನಗೊಂಡಿರುವ ಬಿಜೆಪಿ ಮತ್ತು ಬೊಮ್ಮಾಯಿ ಅವರ ಸರ್ಕಾರ ಸೋಲಿನಿಂದ ಪಾರಾಗಲು ನಾಚಿಕೆಗೇಡಿನ ತಂತ್ರಕ್ಕೆ ಮುಂದಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಿಡಿಕಾರಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ಬಗ್ಗೆ ಟೀಕಿಸಿ ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿಚಾರದಲ್ಲಿ ನಕಲಿ, ಮೋಸ, ದ್ರೋಹದ ತಂತ್ರವನ್ನು ಈ ಸರ್ಕಾರ ಅನುಸರಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಮೋದಿ ಮತ್ತು ಬಿಜೆಪಿ ಸರ್ಕಾರದ ಡಿಎನ್ಎದಲ್ಲಿ ಎಸ್ಸಿ, ಎಸ್ಟಿ ವಿರೋಧಿ ನಡೆ ಇದೆ. ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯದ ಸಹೋದರ ಸಹೋದರಿಯರನ್ನು, ಸುಳ್ಳುಗಳ ಮೂಲಕ ದಾರಿ ತಪ್ಪಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿಯ ಕುತಂತ್ರ, ಮೋಸ ಎಲ್ಲವೂ ಈಗ ಬಟಾಬಯಲಾಗಿದೆ” ಎಂದು ಟೀಕಿಸಿದ್ದಾರೆ.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಿಜೆಪಿ ಸರ್ಕಾರದಿಂದ ಮೋಸ
- ಬೊಮ್ಮಾಯಿ ಸರ್ಕಾರ ಸುಮಾರು ನಾಲ್ಕು ವರ್ಷಗಳ ಕಾಲ ನಾಗಮೋಹನ್ ದಾಸ್ ಅವರ ಸಮಿತಿ ವರದಿ ಜಾರಿ ಮಾಡಲಿಲ್ಲ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಧ್ವನಿ ಎತ್ತುವವರೆಗೂ ಬಿಜೆಪಿ ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಮೌನವಾಗಿತ್ತು.
- ಡಿಸೆಂಬರ್ 26, 2022; ಪರಿಶಿಷ್ಟ ಸಮುದಾಯದ ಜನ ಹಾಗೂ ಕಾಂಗ್ರೆಸ್ ಪಕ್ಷದ ನಿರಂತರವಾಗಿ ವರದಿ ಜಾರಿಗೆ ಅಗ್ರಹ ಮಾಡಿದ ನಂತರ ಬೊಮ್ಮಾಯಿ ಅವರ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಪರಿಶಿಷ್ಟ ಪಂಗಡಗಳ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಏರಿಕೆ ಮಾಡುವ ಕಾಯ್ದೆ ಜಾರಿಗೆ ತಂದಿತು.
- ಜನವರಿ 8, 2023; ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ನಡೆಸಿತು. ಈ ಸಮಾವೇಶದಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಳವನ್ನು ಜಾರಿಗೆ ತರಬೇಕಾದರೆ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು ಎಂದು ಆಗ್ರಹಿಸಲಾಯಿತು.
- ಮಾರ್ಚ್ 14, 2023; ಮೋದಿ ಅವರ ಸರ್ಕಾರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ನಿರಾಕರಿಸಿತು. ಅಲ್ಲದೆ ಈಗಿರುವ ಶೇ.50 ಮೀಸಲಾತಿ ಮಿತಿಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿತು.
- ಮಾರ್ಚ್ 21, 2023; ಕರ್ನಾಟಕ ಕಾಂಗ್ರೆಸ್ ವತಿಯಿಂದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳ ಹಕ್ಕನ್ನು ಕಸಿಯುತ್ತಿರುವುದರ ವಿರುದ್ಧ ಪ್ರತಿಭಟನೆಗೆ ಕರೆ ನೀಡಿತು. ಮಾರ್ಚ್ 24ರಂದು ಬೊಮ್ಮಾಯಿ ಹಾಗೂ ಮೋದಿ ಸರ್ಕಾರದ ದ್ರೋಹವನ್ನು ಖಂಡಿಸಿ ರಾಜಭವನ ಚಲೋ ಪ್ರತಿಭಟನೆಗೆ ಕರೆ ನೀಡಿದರು.
- ಮಾರ್ಚ್ 23, 2023; ಪರಿಶಿಷ್ಟರ ಮೀಸಲಾತಿ ಹೆಚ್ಚಳ ಕಾನೂನು ಜಾರಿ ಮಾಡಿ 3 ತಿಂಗಲವರೆಗೆ ಸುಮ್ಮನಿದ್ದ ಬೊಮ್ಮಾಯಿ ಅವರ ಸರ್ಕಾರ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡುವ ಹಿಂದಿನ ದಿನ ರಾತ್ರಿ ತರಾತುರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಹೆಚ್ಚಳದ ಪ್ರಸ್ತಾವನೆ ಕಳಿಸುವ ಪ್ರಹಸನ ಮಾಡಿದ್ದಾರೆ. ಮೋದಿ ಅವರ ಸರ್ಕಾರ ಮೀಸಲಾತಿ ಹೆಚ್ಚಳವನ್ನು ನಿರಾಕರಿಸಿದ್ದು, ಈಗ ಕೇವಲ ಕಣ್ಣೊರೆಸಲು ಈ ತಂತ್ರ ಮಾಡಿದ್ದಾರೆ.
ಮೋದಿ, ಬೊಮ್ಮಾಯಿ ಅವರ ಸರ್ಕಾರಕ್ಕೆ ಐದು ಪ್ರಶ್ನೆಗಳು
1 ಪರಿಶಿಷ್ಟರ ಮೀಸಲಾತಿಯನ್ನು ಮೋದಿ ಸರ್ಕಾರ ಸಸತ್ತಿನಲ್ಲಿ ಈಗಾಗಲೇ ತಿರಸ್ಕರಿಸಿದ್ದಾರೆ. ಹೀಗಾಗಿ ಈ ನಂಬಿಕೆ ದ್ರೋಹವನ್ನು ಮೋದಿ ಹಾಗೂ ಬೊಮ್ಮಾಯಿ ಅವರು ಒಪ್ಪಿಕೊಳ್ಳುವರೇ?
2 ಮೋದಿ ಹಾಗೂ ಬೊಮ್ಮಾಯಿ ಅವರ ಸರ್ಕಾರ ನಾಗಮೋಹನ್ ದಾಸ್ ಅವರ ವರದಿಯನ್ನು ನಾಲ್ಕು ವರ್ಷಗಳ ಕಾಲ ಧೂಳು ಹಿಡಿಸಿ, ಸರ್ಕಾರದ ಕೊನೆ ಅಧಿವೇಶನದಲ್ಲಿ ಜಾರಿಗೆ ತಂದು ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸದೇ ಇರುವುದು ವಿಶ್ವಾಸಘಾತುಕತನವಲ್ಲವೇ?
3 ಪರಿಶಿಷ್ಟರ ಹಕ್ಕಿನ ವಿಚಾರವಾಗಿ ಕಾಂಗ್ರೆಸ್ ಪಕ್ಷ ಧ್ವನಿ ಎತ್ತಿದಾಗಲೆಲ್ಲಾ ಬಿಜೆಪಿ ಹಾಗೂ ಬೊಮ್ಮಾಯಿ ಅವರ ಸರ್ಕಾರ ಇದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆಯೇ? ನೀತಿ ಸಂಹಿತೆ ಜಾರಿಗೆ ಕೆಲವೇ ದಿನಗಳು ಬಾಕಿ ಇರುವಾಗ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಬಿಜೆಪಿ ಸರ್ಕಾರ ಮತ್ತೊಂದು ನಾಯಕವಾಡುತ್ತಿದೆಯೇ? ಆಮೂಲಕ ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಭರವಸೆ ಕಮರಿದಂತಾಗಿದೆ.
4 ಸಂಸತ್ತಿನಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದ 4 ಕೇಂದ್ರ ಸಚಿವರು, 25 ಸಂಸದರು ಜನರಿಗೆ ದ್ರೋಹ ಬಗೆದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಲ್ಲವೇ?
5 ನಾಳೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ಮೋದಿ ಅವರು ಈ ದ್ರೋಹದ ಜವಾಬ್ದಾರಿ ಹೊತ್ತು ಕ್ಷಮೆ ಕೇಳುವರೇ?