- ಹಾರಿದ ಕೆಲಕ್ಷಣಗಳಲ್ಲೇ ಲ್ಯಾಂಡ್ ಆದ ಬೊಮ್ಮಾಯಿ ಹೆಲಿಕಾಪ್ಟರ್
- ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ಹೊರಟಿದ್ದ ಮುಖ್ಯಮಂತ್ರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೆಲಿಕಾಪ್ಟರ್ ಪ್ರಯಾಣ ಕೆಲಕಾಲ ಗೊಂದಲಕ್ಕೀಡು ಮಾಡಿದ ಸನ್ನಿವೇಶ ಚಿಕ್ಕಬಳ್ಳಾಪುರದಲ್ಲಿ ಇಂದು ನಡೆದಿದೆ.
ಚಿಕ್ಕಬಳ್ಳಾಪುರದ ಎಸ್ಜೆಸಿಐಟಿ ಹೆಲಿಪ್ಯಾಡ್ನಿಂದ ಬೊಮ್ಮಾಯಿಯವರು ರಾಮನಗರಕ್ಕೆ ಹೊರಟಿದ್ದರು. ಅವರು ಪ್ರಯಾಣಿಸುತ್ತಿದ್ದ cಚಾಪರ್ ಟೇಕ್ ಆಫ್ ಆಗಿ ಮತ್ತೆ ಲ್ಯಾಂಡ್ ಆಗಿ ಕೆಲಕಾಲ ಆತಂಕಕ್ಕೆ ಎಡೆಮಾಡಿತ್ತು.
ಹೆಲಿಕಾಪ್ಟರ್ ಲ್ಯಾಂಡಿಂಗ್ ನೋಡಿ ಆತಂಕಗೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಷ್ಟರಲ್ಲಾಗಲೇ ಚಾಪರ್ ಮರಳಿ ಟೇಕ್ ಆಫ್ ಆಗಿ ರಾಮನಗರದತ್ತ ಪ್ರಯಾಣ ಬೆಳೆಸಿದರು.
ಟೇಕ್ ಆಫ್ ಆಗುವ ವೇಳೆಗೆ, ಚಾಪರ್ ಫ್ಯಾನ್ ರಭಸಕ್ಕೆ ದೂಳು ಎದ್ದಿತ್ತು. ಹೀಗಾಗಿ ಪೈಲೆಟ್ಗೆ ಆಕಾಶ ಕಾಣದಂತಾಗಿ ಹೆಲಿಕಾಪ್ಟರ್ ಅನ್ನು ಆತ ಲ್ಯಾಂಡ್ ಮಾಡಿದ. ಬಳಿಕ ದೂಳು ಸರಿದ ನಂತರ ಮತ್ತೆ ಟೇಕಾಫ್ ಮಾಡಿ, ರಾಮನಗರಕ್ಕೆ ಪ್ರಯಾಣ ಬೆಳಸಿದರು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದರು. ಮುಖ್ಯಮಂತ್ರಿಗಳೊಂದಿಗೆ ಆರೋಗ್ಯ ಸಚಿವ ಸುಧಾಕರ್ ಹೆಲಿಕಾಪ್ಟರ್ನಲ್ಲಿದ್ದರು.
ಈ ಸುದ್ದಿ ಓದಿದ್ದೀರಾ? :ಮೀಸಲಾತಿ ಘೋಷಣೆ ಎಂಬುದು ಈ ಸರ್ಕಾರಕ್ಕೆ ಮಕ್ಕಳ ಆಟಿಕೆಯಂತಾಗಿದೆ:…
ಬಿಎಸ್ವೈ ಕಾಡಿದ್ದ ಹೆಲಿಕಾಪ್ಟರ್
ಮಾರ್ಚ್ 6 ರಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಪರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪವಾಗಿತ್ತು. ಜೇವರ್ಗಿಯಲ್ಲಿ ನಡೆಯುತ್ತಿದ್ದ ವಿಜಯ ಸಂಕಲ್ಪ ರಥಯಾತ್ರೆಗೆ ಭಾಗವಹಿಸಲು ಅಂದು ಯಡಿಯೂರಪ್ಪ ನಗರಕ್ಕೆ ಬರುತ್ತಿದ್ದರು. ಅವರ ಆಗಮನಕ್ಕಾಗಿ ನಗರದ ಹೊರ ಆವರಣದಲ್ಲಿ ತಾತ್ಕಾಲಿಕವಾಗಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಹೀಗೆ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿದ್ದವು. ಆಗ ತಕ್ಷಣ ಎಚ್ಚೆತ್ತ ಪೈಲೆಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡದೆ ಬೇರೆಡೆ ತೆಗೆದುಕೊಂಡು ಹೋಗಿ ಸಂಭಾವ್ಯ ಅಪಾಯ ತಡೆಗಟ್ಟಿದರು.