- ಆರ್ಥಿಕ ಲೆಕ್ಕಾಚಾರಗಳನ್ನು ನೋಡಿಕೊಂಡು ನೂತನ ಬಜೆಟ್ ಮಂಡನೆ
- ಅಧಿಕಾರ ಸ್ವೀಕರಿಸಿ ಮೊದಲ ದಿನವೇ ಜನಪರ ಯೋಜನೆಗಳ ಜಾರಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೇ ಜುಲೈ ತಿಂಗಳಿನಲ್ಲಿ ತನ್ನ ಮೊದಲ ಬಜೆಟ್ ಮಂಡನೆಗೆ ಸಿದ್ದವಾಗುತ್ತಿದೆ.
ಈ ಕುರಿತು ಖುದ್ದು ಸಿಎಂ ಮಾಹಿತಿ ನೀಡಿದ್ದು, ʼಕೈʼ ಸರ್ಕಾರದ ಮೊದಲ ಹಾಗೂ ವಿಧಾನಮಂಡಲದ ಮಳೆಗಾಲದ ಅಧಿವೇಶನ ಜುಲೈನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲೇ ಹೊಸ ಬಜೆಟ್ ಮಂಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಇದೇ 22ರಿಂದ 24 ರವರೆಗೆ ಮೂರು ದಿನಗಳ ಕಾಲ ಅಧಿವೇಶನ ಕರೆಯಲಾಗುವುದು, ಜುಲೈ ತಿಂಗಳಲ್ಲಿ ಆಯವ್ಯಯ ಮಂಡಿಸಲಾಗುವುದು” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಆದೇಶ ನೀಡಿರುವ ಸರ್ಕಾರ ಈಗ ಅದರ ಆರ್ಥಿಕ ಲೆಕ್ಕಾಚಾರದ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.
ಈ ಬಗ್ಗೆಯೂ ಮಾಹಿತಿ ನೀಡಿರುವ ಸಿದ್ದರಾಮಯ್ಯ, ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ಗಳನ್ನು ಉಚಿತವಾಗಿ ನೀಡಲು ತಿಂಗಳಿಗೆ ₹1200 ಕೋಟಿ ಅನುದಾನದ ಅಗತ್ಯವಿದೆ.
ಪ್ರತಿ ಮನೆಯ ಒಡತಿಗೆ ಮಾಸಿಕ ₹2000, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ, ಈ ವರ್ಷ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ ₹3,000 ಹಾಗೂ ಡಿಪ್ಲೊಮಾ ಪಾಸಾದವರಿಗೆ ₹1500 ಯುವನಿಧಿಯಡಿ ನೀಡಲಾಗುವುದು.
ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇವುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಸ್ತೃತ ರೂಪುರೇಷೆ ಸಿದ್ಧಪಡಿಸಲಾಗುವುದು.
ಇಂದಿರಾ ಕ್ಯಾಂಟೀನ್ಗಳ ಪುನರಾರಂಭ ಮಾಡಲಾಗುವುದು. ಹಾಗಾಗಿ ಇವುಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಸಿಎಂ ಹೇಳಿದರು.
ಹಿಂದಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2023-24ನೇ ಸಾಲಿಗಾಗಿ ₹3 ಲಕ್ಷ ಕೋಟಿಗಳ ಭಾರೀ ಆಯವ್ಯಯ ಮಂಡಿಸಿತ್ತು. ಇದರಲ್ಲಿ ₹77,750 ಕೋಟಿ ಸಾಲ ಪಡೆಯುವುದಾಗಿ ತಿಳಿಸಿತ್ತು.
ಬಹಿರಂಗ ಮಾರುಕಟ್ಟೆಯಿಂದ ₹70,295 ಕೋಟಿ ಸಾಲವನ್ನು, ಕೇಂದ್ರದಿಂದ ₹6,254 ಕೋಟಿ, ಎನ್ಎಸ್ಎಸ್ಎಸ್ಎಫ್, ಎನ್ಸಿಡಿಸಿ ಮತ್ತು ಆರ್ಐಡಿಎಫ್ಗಳಿಂದ ₹1,201 ಕೋಟಿ ಸಾಲ ಪಡೆಯುವುದಾಗಿ ಬೊಮ್ಮಾಯಿ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ?:4 ಲಕ್ಷ ಕೋಟಿ ಕೊಟ್ಟರೂ 5 ಸಾವಿರ ಕೋಟಿ…
ಹಾಗೆಯೇ 2023-24ರ ಕೊನೆಗೆ ರಾಜ್ಯ ಸರಕಾರದ ಒಟ್ಟು ಸಾಲ ₹5.64,896 ಕೋಟಿಗಳಾಗುತ್ತದೆ. ಇದು ಜಿಎಸ್ಡಿಪಿಯ ಶೇ. 24.20ರಷ್ಟಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
ಈಗ ಈ ಎಲ್ಲ ಲೆಕ್ಕಾಚಾರಗಳನ್ನು ಪರಾಮರ್ಶಿಸಿ ಪುನರ್ ರೂಪಿಸಿ ನಾಗರಿಕರಿಗೆ ಹೊರೆಯಾಗದ ರೀತಿ ನೂತನ ಬಜೆಟ್ ಮಂಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ನೂತನ ಸಂಪುಟ ರಚನೆ ಬಳಿಕ ಇಲಾಖೆ ಸಚಿವರ ವಿಚಾರ ಆಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆ ಬಜೆಟ್ ರೂಪುರೇಷೆಯನ್ನು ಸರ್ಕಾರ ರಚಿಸಲಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.