- ಮೊದಲ ಭಾಷಣದಲ್ಲೇ ಕೇಂದ್ರ ಸರ್ಕಾರದ ಮೋಸ ಬಹಿರಂಗ ಪಡಿಸಿದ ಸಿಎಂ
- ನಮ್ಮ ತೆರಿಗೆ ಹಣವನ್ನು ಹಿಂಪಡೆಯಲಾಗದ ಸಂಸದರು ನಿಜಕ್ಕೂ ಅಸಮರ್ಥರು
ರಾಜ್ಯದಿಂದ ಕೇಂದ್ರಕ್ಕೆ ಜಿಎಸ್ಟಿಯನ್ನೂ ಒಳಗೊಂಡಂತೆ ವಿವಿಧ ರೂಪದ 4 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಹೋಗುತ್ತದೆ. ಆದರೆ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ಹಿಂತಿರುಗಿಸುವಲ್ಲಿ ಕೇಂದ್ರ ಮೋಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಶನಿವಾರ ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ತನ್ನ ಅವಧಿಯಲ್ಲಿ ಪಾವತಿ ಮಾಡಿದ್ದ ಜಿಎಸ್ಟಿ ತೆರಿಗೆಯನ್ನು ವಾಪಸ್ ಪಡೆದುಕೊಂಡಿಲ್ಲ.
ಇತ್ತ ಕೇಂದ್ರವೂ ರಾಜ್ಯಕ್ಕೆ ಕೊಡಬೇಕಾಗಿದ್ದ 5,495 ಸಾವಿರ ಕೋಟಿ ರೂಪಾಯಿಯನ್ನು ಪಾವತಿ ಮಾಡಿಲ್ಲ. ಇದುವರೆಗೆ ರಾಜ್ಯಕ್ಕೆ ಅನ್ಯಾಯ ಮಾಡಿದ ಸರ್ಕಾರ ಯಾವುದಾದರೂ ಇದ್ದರೆ ಅದು ಕೇಂದ್ರದ ಬಿಜೆಪಿ ಸರ್ಕಾರ ಮಾತ್ರ. ಪ್ರಧಾನಿ ನರೇಂದ್ರ ಮೋದಿಯಿಂದ ಕರ್ನಾಟಕಕ್ಕೆ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಈ ಎಲ್ಲ ವಿಚಾರಗಳು ಗೊತ್ತಿರುವ ನಮ್ಮ ರಾಜ್ಯ ಪ್ರತಿನಿಧಿಸುವ ಬಿಜೆಪಿಯ 25 ಜನ ಸಂಸದರೂ ಈ ಬಗ್ಗೆ ಕೇಳುವ ಧೈರ್ಯ ಮಾಡಿಲ್ಲ. ಹಾಗೆಯೇ ಜಿಎಸ್ಟಿ ಕೌನ್ಸಿಲ್ನ ಸದಸ್ಯರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?:ಜನಹಿತಕ್ಕಾಗಿ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಜೆಡಿಎಸ್ ಬೆಂಬಲ: ಎಚ್ಡಿಕೆ
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶ ಸಾಲದ ಸುಳಿಗೆ ಸಿಲುಕಿದೆ. ಬಿಜೆಪಿ ಸರ್ಕಾರ ದೇಶವನ್ನು ಸಾಲಗಾರನನ್ನಾಗಿ ಮಾಡಿ ಕೂರಿಸಿದೆ ಎಂದ ಸಿಎಂ, ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ದೇಶದ ಮೇಲೆ 53 ಲಕ್ಷದ 11 ಸಾವಿರ ಕೋಟಿ ಸಾಲವಿತ್ತು. ಆದರೆ ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ 155 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಮಾಹಿತಿ ನೀಡಿದರು.
ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ ರಾಜ್ಯದ ಸಾಲ 3 ಲಕ್ಷದ 27 ಸಾವಿರ ಕೋಟಿ ಇತ್ತು. ಹಿಂದಿನ ಬಿಜೆಪಿ ಸರ್ಕಾರ 5 ಲಕ್ಷದ 64 ಸಾವಿರ ಕೋಟಿ ಸಾಲ ಮಾಡಿದೆ ಎಂದ ಸಿದ್ದರಾಮಯ್ಯ, ಈ ಎಲ್ಲ ಹೊರೆಗಳ ನಡುವೆ ಆರ್ಥಿಕತೆ ಸರಿದೂಗಿಸಿಕೊಂಡು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದು ಎಂದು ಸಿದ್ದರಾಮಯ್ಯ ಹೇಳಿದರು.
👌👍