ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಗೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಸೆ. 19ಕ್ಕೆ ಶನಿವಾರದಂದು ಭೇಟಿ ನೀಡಲಿದ್ದಾರೆ.
ಸೆ. 19ರಂದು ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಈ ವಿಶೇಷ ಸಂಚಾರ ನಿಯಮಗಳು ಜಾರಿಯಲ್ಲಿರಲಿವೆ. ಈ ಅವಧಿಯಲ್ಲಿ ಜೆ.ಸಿ.ಐ ಸರ್ಕಲ್ನಲ್ಲಿ ನಿಲ್ಲಿಸುವ ಗೂಡ್ಸ್ ವಾಹನಗಳು, ಬಾಳೆಹೊನ್ನೂರು ಪೊಲೀಸ್ ಠಾಣೆಯ ಪಕ್ಕ ಹಾಗೂ ಮಾರ್ಕೆಟ್ ರಸ್ತೆಯ ಪ್ಯಾಸೆಂಜರ್ ಆಟೋ ರಿಕ್ಷಾಗಳ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ. ಬಾಳೆಹೊನ್ನೂರು ಬಸ್ ನಿಲ್ದಾಣದ ಆರ್ಚ್ (ಕಮಾನು) ಮುಂಭಾಗದಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದೇ ರೀತಿ ಜೆ.ಸಿ.ಐ ಸರ್ಕಲ್ನಿಂದ ಭದ್ರಾ ಕ್ಲಬ್ ವರೆಗೆ, ಸೌಂದರ್ಯ ಹೋಟೆಲ್ ತಿರುವಿನಿಂದ ಭದ್ರಾ ಕ್ಲಬ್ ವರೆಗೆ ಹಾಗೂ ಜೆ.ಸಿ.ಐ ಸರ್ಕಲ್ನಿಂದ ನರಸಿಂಹರಾಜಪುರ ರಸ್ತೆಯ ಕಡ್ಲೆಮಕ್ಕಿ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಪಾರ್ಕಿಂಗ್ ಸಂಪೂರ್ಣ ನಿರ್ಬಂಧಿಸಲಾಗಿದೆ.
ಈ ಕಾರ್ಯಕ್ರಮ ಹಾಗೂ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಶ್ರೀ ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿಲುಗಡೆ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಭಾಗಗಳಿಂದ ಪಟ್ಟಣಕ್ಕೆ ಪ್ರವೇಶಿಸುವ ಪ್ರಯಾಣಿಕರ ಬಸ್ಸುಗಳ ಸಂಚಾರಕ್ಕೂ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಲಾಗಿದೆ. ಚಿಕ್ಕಮಗಳೂರು ಮತ್ತು ಆಲ್ಲೂರಿನಿಂದ ಬರುವ ಬಸ್ಸುಗಳು ಪ್ರಯಾಣಿಕರನ್ನು ಬಸ್ ನಿಲ್ದಾಣದಲ್ಲಿ ಇಳಿಸಿ, ನಂತರ ಖಾಲಿ ಬಸ್ಸುಗಳನ್ನು ಭದ್ರಾ ಕ್ಲಬ್ ಬಳಿ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್ ಮಾಡಬೇಕು. ಕಳಸ ಕಡೆಯಿಂದ ಬರುವ ಬಸ್ಸುಗಳು ನಿಲ್ದಾಣದಲ್ಲಿ ಜನರನ್ನು ಇಳಿಸಿದ ಬಳಿಕ ಕಳಸ ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಬೇಕಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಲೆನಾಡಿನ ಕರಾಳ ಅರಣ್ಯ ಕಾಯ್ದೆ ರದ್ದಾಗಬೇಕು; ಹಕ್ಕು ವಂಚಿತರಿಗೆ ಹಕ್ಕು ಸಿಗಬೇಕು; ಕೆ.ಎಲ್ ಅಶೋಕ್
ಕೊಪ್ಪ ಕಡೆಯಿಂದ ಮೇಲ್ಪಾಲ್ ಮಾರ್ಗವಾಗಿ ಬರುವ ಬಸ್ಸುಗಳು ರಂಭಾಪುರಿ ಮಠದ ಮೇಲ್ಪಾಲ್ ರಸ್ತೆಯಲ್ಲಿ, ಜಯಪುರ ಮಾರ್ಗದಿಂದ ಬರುವ ಬಸ್ಸುಗಳು ಕೊಪ್ಪ ರಸ್ತೆಯ ಒಂದು ಬದಿಯಲ್ಲಿ ಹಾಗೂ ನ.ರಾ. ಪುರ ಕಡೆಯಿಂದ ಬರುವ ಬಸ್ಸುಗಳು ನಾರಾಯಣ ಗುರು ಸಮುದಾಯ ಭವನದ ಆವರಣದಲ್ಲಿ ಖಾಲಿ ಬಸ್ಸುಗಳನ್ನು ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಪಟ್ಟಣದಲ್ಲಿ ಯಾವುದೇ ರೀತಿಯ ಸಂಚಾರ ದಟ್ಟಣೆ ಹಾಗೂ ಅಡಚಣೆ ಉಂಟಾಗದಂತೆ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಮಾರ್ಗದರ್ಶನ ಮತ್ತು ಸೂಚನೆಗಳನ್ನು ಸಾರ್ವಜನಿಕರು ತಪ್ಪದೆ ಪಾಲಿಸಿ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಸ್ಥಳೀಯ ಪೊಲೀಸ್ ಇಲಾಖೆಯು ಸಂಚಾರ ಮಾರ್ಗ ಬದಲಾವಣೆ ಹಾಗೂ ಪಾರ್ಕಿಂಗ್ ನಿರ್ಬಂಧಗಳನ್ನು ವಿಧಿಸಿ ಪ್ರಕಟಣೆ ಹೊರಡಿಸಿದೆ.




