ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲ್ಲೂಕುಗಳ ವ್ಯಾಪ್ತಿಯ ಏಳು ದ್ವೀಪಗಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲ್ಲೂಕುಗಳ ವ್ಯಾಪ್ತಿಯ ಮಧ್ಯಲಿಂಗಡ್, ದೇವಗಡ, ಹಾಗ್, ಮೊಂಗೆರಗುಡ್ಡ, ಕಿರಿಕುಂದ, ಅಂಕನಿ ಚೆಗ್ಗುಡು ಮತ್ತು ಕುರುಮಗಡ ದ್ವೀಪಗಳ ಒಟ್ಟು 59 ಎಕರೆ 31 ಗುಂಟೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಿಂದ ₹307.71 ಕೋಟಿ ಆದಾಯ ಹಂಚಿಕೆ ನಿರೀಕ್ಷಿಸಲಾಗಿದ್ದು, ವಾರ್ಷಿಕ ₹8.7 ಕೋಟಿ ಗುತ್ತಿಗೆ ಶುಲ್ಕ ನಿಗದಿಪಡಿಸಲಾಗಿದೆ.
ಗುತ್ತಿಗೆ ಶುಲ್ಕದಲ್ಲಿ ಪ್ರತಿ ವರ್ಷ ಶೇ.5ರಷ್ಟು ಹೆಚ್ಚಳವಾಗಲಿದೆ. ಇದೇ ವೇಳೆ ಕರಾವಳಿ ಪ್ರದೇಶಗಳಲ್ಲಿನ ಅಭಿವೃದ್ಧಿ ಚಟುವಟಿಕೆಗಳು ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಜಾರಿಯಲ್ಲಿರುವ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) 2019 ಅನ್ನು ನಿಯಮಾನುಸಾರ ಪರಿಷ್ಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ಯುವಜನರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಅಗತ್ಯ: ಕೆ.ಎಸ್. ಬಸವಂತಪ್ಪ
ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ನಕ್ಷೆಗಳು ಹಾಗೂ ವಸ್ತುಸ್ಥಿತಿಯಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವಂತೆ ವಿವಿಧ ವರ್ಗಗಳಿಂದ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು ₹98.24 ಕೋಟಿಯಿಂದ ₹250.05 ಕೋಟಿಗೆ ಹೆಚ್ಚಿಸಲು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಸ್ತುತ ಇರುವ 2,000 ಮೀಟರ್ ರನ್ವೇಯನ್ನು A-320 ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3,250 ಮೀಟರ್ಗೆ ವಿಸ್ತರಿಸುವ ಉದ್ದೇಶವಿದೆ. ಭೂಸ್ವಾಧೀನ, ಬಾಧಿತರ ಪುನರ್ವಸತಿ, ಸಂಪರ್ಕ ರಸ್ತೆ ಹಾಗೂ ಸಿವಿಲ್ ಎನ್ಕ್ಲೇವ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹೆಚ್ಚುವರಿ ವೆಚ್ಚ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಯೋಜನಾ ಮೊತ್ತ ಹೆಚ್ಚಿಸಲಾಗಿದೆ.
ಈವರೆಗೆ 93 ಎಕರೆ 22 ಗುಂಟೆ ಜಮೀನು ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. ರನ್ವೇ ನಿರ್ಮಾಣಕ್ಕೆ 59 ಎಕರೆ 14 ಗುಂಟೆ ಹಾಗೂ ಸಿವಿಲ್ ಎನ್ಕ್ಲೇವ್ ನಿರ್ಮಾಣಕ್ಕೆ 32 ಎಕರೆ 20 ಗುಂಟೆ ಜಮೀನು ಅಗತ್ಯವಿದೆ. ಇದರ ಜೊತೆಗೆ ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಗೆ ₹20 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕರ್ನಾಟಕದ ಕರಾವಳಿಯ ಮೀನುಗಾರಿಕಾ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕರಾವಳಿ ಪ್ರದೇಶಗಳನ್ನು ವಿಶೇಷ ಸಮುದ್ರ ವಲಯ (SMZ) ಎಂದು ಅಧಿಸೂಚಿಸಲು ಸಚಿವ ಸಂಪುಟ ತೀರ್ಮಾನಿಸಿದೆ.




