“ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಾಗೆಯೇ ಉಳ್ಳಾಲದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ” ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ತಿಳಿಸಿದರು.
ಈ ಸಂಬಂಧ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಜಿ ಪರಮೇಶ್ವರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. “ಮಂಗಳೂರಿನ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಇನ್ನೂರು ಬೆಡ್ಗಳನ್ನು ಹೆಚ್ಚಿಸಲಾಗುವುದು. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ ಒದಗಿಸಲಾಗುವುದು. ಇದು ಪ್ರಾದೇಶಿಕ ಕೇಂದ್ರ ಆಸ್ಪತ್ರೆಯಾಗಿರಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?
“ಮರವೂರು ಮತ್ತು ಹತ್ತು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 11 ಕೋಟಿ ರೂಪಾಯಿ ಅನುಮೋದನೆ ಮಾಡಲಾಗಿದೆ. ಬಂಟ್ವಾಳದ ಕೆಲವೆಡೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಘೋಷಿಸಿದರು. ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಹಾಸ್ಟೆಲ್ ನಿರ್ಮಾಣಕ್ಕೆ 425 ಕೋಟಿ ರೂಪಾಯಿಯನ್ನು ಸಂಪುಟ ಮಂಜೂರು ಮಾಡಿದೆ” ಎಂದರು.
“ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು 20 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಮಂಗಳೂರಿನ ಎಕ್ಕೂರು ಗ್ರಾಮದಲ್ಲಿ ಮೀನುಗಾರಿಕೆ ಮಾರುಕಟ್ಟೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ವಿಶೇಷ ಸಮುದ್ರ ವಲಯ (EEZ) ಮತ್ತು ವಿಶೇಷ ಸಂಸ್ಕರಣಾ ವಲಯ (EPZ) 30 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ 40 ಸೀಟುಗಳು ಮಾತ್ರ ಇತ್ತು. ಈಗ ವಿಶ್ವವಿದ್ಯಾಲಯ ಮಾಡಿ, 200 ಸೀಟುಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 11 ಕೋಟಿ ಮೀಸಲಿಡಲಾಗಿದೆ. ರೂಪುರೇಷೆ ತಯಾರಾದ ಬಳಿಕ ಅನುಮೋದನೆ ನೀಡಲಾಗುವುದು” ಎಂದು ತಿಳಿಸಿದರು.
“ಕಾರ್ಕಳದ ಅತ್ತೂರು ಚರ್ಚ್ಗೆ 2.75 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಬೆಂಗರೆಯಿಂದ ಉಳ್ಳಾಲ ಕೋಟೆಪುರದವರೆಗೆ ಮೀನುಗಾರಿಕಾ ಬಂದರು, ನಾಡದೋಣಿ ತಂಗುದಾಣ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ” ಎಂದು ತಿಳಿಸಿದರು.
“ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಕಾನೂನಿನಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ ಶೇಕಡ 30ರಷ್ಟು ಮೀಸಲಾತಿ ಬುಡಕಟ್ಟು ಜನಾಂಗಕ್ಕೆ ಸೇರುತ್ತದೆ. ಸೋಲಿಗ, ಜೇನು ಕುರುಬ, ಗೌಡರು, ಮಲೆಕುಡಿಯರು, ಕಾಡುಕುರುಬ, ಎಡವರ, ಕೊರಗರು, ಸಿದ್ಧಿ ಮೊದಲಾದವು ಸೇರಿದೆ” ಎಂದರು.




