- ಬಿಬಿಎಂಪಿ ಚುನಾವಣೆ, ಮಳೆ ಸಮಸ್ಯೆ ವಿಚಾರಗಳ ಚರ್ಚೆಗೆ ಕರೆದಿದ್ದ ಸಭೆ
- ವಿಧಾನಸೌಧದಲ್ಲಿ ಸರ್ವಪಕ್ಷ ಬೆಂಗಳೂರು ಶಾಸಕರ ಸಭೆ ಕರೆದಿದ್ದ ಡಿಕೆಶಿ
ಬೆಂಗಳೂರು ನಗರದ ಶಾಸಕ ಸಂಸದರೊಂದಿಗೆ ನಗರದ ಅಭಿವೃದ್ದಿ ಮತ್ತು ಸಮಸ್ಯೆ ಆಧಾರಿತ ವಿಚಾರಗಳ ಚರ್ಚೆ ಸಲುವಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆದಿದ್ದ ಮೊದಲ ಸಭಾವೇದಿಕೆ ಆಡಳಿತ ಹಾಗೂ ವಿಪಕ್ಷ ನಡುವಿನ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರ ತಂಡ ಗೈರಾದರೆ, ಶಾಸಕ ರವಿ ಸುಬ್ರಹ್ಮಣ್ಯ, ಸಂಸದರಾದ ತೇಜಸ್ವಿ ಸೂರ್ಯ, ಪಿ ಸಿ ಮೋಹನ್ ಹಾಜರಾಗಿದ್ದರು.
ಇಂದಿನ (ಜೂನ್ 5) ಸಭೆಯಲ್ಲಿ ಅಭಿವೃದ್ದಿಶೀಲ ಬೆಂಗಳೂರನ್ನು ಹೊಸ ಮಜಲಿಗೆ ಕೊಂಡೊಯ್ಯುವ ಹಾಗೂ ಇಲ್ಲಿನ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲಹೆ ಸೂಚನೆಗಳು ಹಾಗೂ ಬಿಬಿಎಂಪಿ ಚುನಾವಣೆ ಸಂಬಂಧಿ ಚರ್ಚೆಗಳು ನಡೆಯಲಿವೆ. ಆದರೆ ಸಭೆ ಆರಂಭಕ್ಕೂ ಮುನ್ನ ಡಿಸಿಎಂ ವಿರುದ್ದ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಆಕ್ರೋಶ ಹೊರ ಹಾಕಿದರು.
ಈ ಸುದ್ದಿ ಓದಿದ್ದೀರಾ?:ನಮ್ಮ ಡಿಸಿಎಂ | ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿ ಬೆಳೆದ ಶಿವಕುಮಾರ್
ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಲುವಾಗಿ ಸಭೆ ಕರೆಯಲಾಗಿತ್ತು, ಹನ್ನೊಂದು ಗಂಟೆಗೆ ಈ ಸಭೆ ನಿಗದಿಯಾಗಿತ್ತು. ಆದರೆ ನಮ್ಮನ್ನ ಸಭೆಗೆ ಕರೆದ ಡಿಸಿಎಂ ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಿದ್ದಾರೆ. ತಡವಾಗಿ ಬಂದು ಸಭೆ ನಡೆಸುತ್ತಿದ್ದಾರೆ.
ಈ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ, ಅಷ್ಟು ಸಾಲದು ಎನ್ನುವಂತೆ ಅವರು ಶಿಷ್ಟಾಚಾರದ ಆಹ್ವಾನವನ್ನು ಸಭೆಗೆ ನೀಡದೆ, ನಿನ್ನೆ ಸಂಜೆ ಕೇವಲ ವಾಟ್ಸಪ್ ಮೂಲಕ ಆಹ್ವಾನ ನೀಡಿದ್ದಾರೆ.
ಈ ಮೂಲಕ ಉದ್ದೇಶಪೂರ್ವಕವಾಗಿ ಅವರ ನಡವಳಿಕೆ ಪ್ರದರ್ಶಿಸಿದ್ದಾರೆ ಎಂದ ಅವರು ಈ ಕಾರಣದಿಂದಲೇ ನಾವುಗಳು ಸಭೆಯಿಂದ ನಿರ್ಗಮಿಸುತ್ತಿದ್ದೇವೆ ಎಂದರು. ಇವರಿಗೆ ಶಾಸಕರಾದ ಮುನಿರತ್ನ, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು ಜೊತೆಯಾಗಿದ್ದರು.