ವಿವಾದಾತ್ಮಕ ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಶುಕ್ರವಾರ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠ, ಪ್ರತಿವಾದಿಗಳ ವಾದವನ್ನು ಆಲಿಸದೆ ಚಿತ್ರಕ್ಕೆ ತಡೆ ನೀಡುವ ಯಾವುದೇ ಪ್ರಸ್ತಾಪ ನಿರಾಕರಿಸಿ, ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
“ಸಿನಿಮಾವನ್ನು ದೇಶಾದ್ಯಂತ ಪ್ರದರ್ಶಿಸಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಏಕೆ ಸಿನಿಮಾ ನಿಷೇಧಿಸಿದೆ. ಚಿತ್ರ ಪ್ರದರ್ಶನಕ್ಕೆ ಏಕೆ ಅನುಮತಿ ನೀಡಿಲ್ಲ? ಇದೇ ರೀತಿಯ ವಿವಿಧ ಜನಸಮುದಾಯ ಹೊಂದಿರುವ ದೇಶದ ವಿವಿಧ ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಅದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದಾಗಿರಬಹುದು, ಸಿನಿಮಾ ನಿಷೇಧಕ್ಕೂ ಹಾಗೂ ಚಿತ್ರದ ಸಿನಿಮೀಯ ಮೌಲ್ಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ದಿ ಕೇರಳ ಸ್ಟೋರಿ’ ಸಿನಿಮಾ ಬಹಿಷ್ಕರಿಸಿ; ಸಿನಿಪ್ರೇಮಿಗಳಿಗೆ ಸಚಿವರ ಮನವಿ
ಕೇರಳದ 32,000 ಮಹಿಳೆಯರು ಐಸಿಸ್ಗೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳುವ ಚಲನಚಿತ್ರವು ವಿಪಕ್ಷಗಳ ರಾಜ್ಯಗಳಲ್ಲಿ ಅಡೆತಡೆಗಳನ್ನು ಎದುರಿಸಿದರೆ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿಗಳನ್ನು ಪಡೆದುಕೊಂಡಿದೆ. ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ವಿಪುಲ್ ಶಾ ನಿರ್ಮಿಸಿದ್ದಾರೆ.
32,000 ಮಹಿಳೆಯರು ಐಸಿಸ್ಗೆ ಸೇರುತ್ತಿರುವುದು ಸುಳ್ಳಿನಿಂದ ಕೂಡಿದ ದುರುದ್ದೇಶದ ಚಿತ್ರ ಎಂದು ವಿಪಕ್ಷಗಳು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿವೆ.