- ಬಾಗಲಕೋಟೆ, ಶಿವಮೊಗ್ಗ ಜಿಲ್ಲೆಯಲ್ಲಿ ಬಂಜಾರ ಸಮುದಾಯದಿಂದ ಪ್ರತಿಭಟನೆ
- ಸರ್ಕಾರದ ವಿರುದ್ಧ ಆಕ್ರೋಶ, ಬಿಜೆಪಿ ಬಾವುಟ ಕಿತ್ತೆಸೆದ ಪ್ರತಿಭಟನಾಕಾರರು
ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಒಳಮೀಸಲಾತಿ ಹಂಚಿಕೆ ವಿರೋಧಿಸಿ ರಾಜ್ಯದ ನಾನಾ ಕಡೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಒಳಮೀಸಲಾತಿ ಹಂಚಿಕೆ ವಿರೋಧಿಸಿ ಶಿಕಾರಿಪುರದಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಬೆನ್ನಲ್ಲೇ ಒಳಮೀಸಲಾತಿ ವಿರೋಧಿಸಿ ಮಂಗಳವಾರವು ಪ್ರತಿಭಟನೆ ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲಾದ್ಯಂತ ಆಕ್ರೋಶ ವಿಸ್ತರಣೆಯಾಗುತ್ತಿದೆ.
ಮಂಗಳವಾರ ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿಯಲ್ಲಿ ಬಂಜಾರ ಸಮುದಾಯ ರಸ್ತೆ ತಡೆ ನಡೆಸಿ, ಟೈರ್ಗಳಿಗೆ ಬೆಂಕಿ ಹಂಚಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನೂರಾರು ಜನರು, “ಯಾವುದೇ ಕಾರಣಕ್ಕೂ ಒಳಮೀಸಲಾತಿ ವರ್ಗೀಕರಣ ಜಾರಿಯಾಗಬಾರದು” ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ದಂಗೆದ್ದ ಬಂಜಾರ ಸಮುದಾಯ
ವಿಧಾನಸಭೆ ಚುನಾವಣೆ ಹೊತ್ತಲ್ಲಿ ಮಾ.24ರಂದು ರಾಜ್ಯ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಳಮೀಸಲಾತಿ ಹಂಚಿಕೆಯ ತೀರ್ಮಾನ ಕೈಗೊಂಡಿದ್ದರು.
ಅಂದಿನಿಂದ ಒಳಮೀಸಲಾತಿ ವಿರೋಧಿಸಿ ಹೊತ್ತಿಕೊಂಡ ಬೆಂಕಿ ಈಗ ರಾಜ್ಯದ ನಾನಾ ಕಡೆ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಲಂಬಾಣಿ ಅಥವಾ ಬಂಜಾರ ಸಮುದಾಯ ಒಳಮೀಸಲಾತಿ ಹಂಚಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಆ ಸಮುದಾಯ ಅಲ್ಲಲ್ಲಿ ದಂಗೆ ಏಳುತ್ತಿದೆ.
ಈ ಸುದ್ದಿ ಓದಿದ್ದೀರಾ? ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ; ಕಾಂಗ್ರೆಸ್ ಕೈವಾಡವಿದೆ ಎಂದ ಸಿಎಂ ಬೊಮ್ಮಾಯಿ
ಬಾಗಲಕೋಟೆ ಜಿಲ್ಲೆಯಲ್ಲೂ ಪ್ರತಿಭಟನೆ
ಒಳಮೀಸಲಾತಿ ವಿರೋಧಿಸಿ ಬಾಗಲಕೋಟೆ ಜಿಲ್ಲೆಯ ಹಲವು ತಾಂಡಾಗಳಲ್ಲೂ ಮಂಗಳವಾರ ಪ್ರತಿಭಟನೆ ನಡೆದಿದೆ. ಲಂಬಾಣಿ ಸಮುದಾಯದ ಜನರು ತಮ್ಮ ತಮ್ಮ ತಾಂಡಾಗಳಲ್ಲಿ ಕಟ್ಟಿದ್ದ ಬಿಜೆಪಿ ಬಾವುಟಗಳನ್ನು ಕಿತ್ತು ಬಿಸಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಚಖಂಡಿ ತಾಂಡಾ, ಕಮತಗಿ ತಾಂಡಾ, ಆಚನೂರು ತಾಂಡಾ, ಸುನಗ ತಾಂಡಾ, ಹುನಗುಂದ ತಾಲ್ಲೂಕಿನ ಅಮೀನಗಡ ತಾಂಡಾಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ.
“ಒಳಮೀಸಲಾತಿ ವರ್ಗೀಕರಣದಿಂದ ಲಂಬಾಣಿ ಸಮುದಾಯಕ್ಕೆ ಅನ್ಯಾಯವಾಗಿದೆ” ಎಂದು ಬಾಗಲಕೋಟೆ ಜಿಲ್ಲೆಯ ಲಂಬಾಣಿ ಸಮುದಾಯದ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.