- ಸಚಿವ ಸೋಮಣ್ಣ ಅಸಮಾಧಾನಕ್ಕೆ ಮದ್ದು ನೀಡಲು ಬಿಜೆಪಿ ಯತ್ನ
- ಲಿಂಗಾಯತರ ಭಿನ್ನಮತ ಸ್ಪೋಟದ ಆತಂಕದಿಂದ ಕೊಂಚ ನಿರಾಳ
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಎಚ್ಚೆತ್ತುಕೊಂಡಿರುವ ಬಿಜೆಪಿ, ಈಗ ಪಕ್ಷದೊಳಗಿನ ಒಳಭೇಗುದಿಗಳನ್ನು ಬದಿಗೆ ಸರಿಸಿ ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಮುಖಗಳ ರೂಪದಲ್ಲಿ ಕುಟುಂಬ ರಾಜಕಾರಣದ ಕುಡಿಗಳಿಗೆ ಅವಕಾಶ ನೀಡಲು ಸಿದ್ದವಾಗಿದ್ದ ಯೋಚನೆಯಿಂದ ಪಕ್ಷ ಹಿಂದೆ ಸರಿದಿದೆ.
ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಪಕ್ಷದ ಜವಾಬ್ದಾರಿ ಹೊರಿಸುವ ಮೂಲಕ ಈ ಸಂದೇಶವನ್ನು ಬಿಜೆಪಿ ಹೊರಡಿಸಿದೆ. ಈ ಹಿಂದೆ ಮಗನ ರಾಜಕೀಯ ಪ್ರವೇಶದ ವಿಚಾರವಾಗಿ ಸೋಮಣ್ಣ ಪಕ್ಷದೊಂದಿಗೆ ಮುನಿಸಿಕೊಂಡು ಪಕ್ಷಾಂತರಕ್ಕೆ ಮುಂದಾಗಿದ್ದರು ಎನ್ನಲಾಗಿತ್ತು.
ಆ ವೇಳೆ ಮಧ್ಯ ಪ್ರವೇಶಿಸಿದ್ದ ದೆಹಲಿ ನಾಯಕರು, ಸಮಸ್ಯೆಗೆ ಪರಿಹರಿಸುವ ನಿಟ್ಟಿನಲ್ಲಿ ಸೋಮಣ್ಣ ಅವರಿಗೆ ಕೇಳಿದ ಜಿಲ್ಲೆಯ ಉಸ್ತುವಾರಿ ಹಾಗೂ ಹಾಲಿ ಸ್ಪರ್ಧಿಸುತ್ತಿರುವ ಗೋವಿಂದರಾಜನಗರ ಕ್ಷೇತ್ರದಿಂದ ಟಿಕೆಟ್ ಕೊಡಲು ಒಪ್ಪಿಗೆ ನೀಡಿತ್ತು.
ಜತೆಗೆ ಅವರ ಪುತ್ರ ಅರುಣ್ಗೆ ರಾಜಕೀಯ ಅಸ್ತಿತ್ವ ಕಲ್ಪಿಸಲು ಪಕ್ಷದ ಜವಬ್ದಾರಿ ಹೊರಿಸಿ ಸಮಾಧಾನ ಮಾಡಲು ಮುಂದಾಗಿತ್ತು. ಈಗ ಅದೇ ಯೋಜನೆಯನ್ನು ಕಾರ್ಯಗತಗೊಳಿಸಿರುವ ರಾಜ್ಯ ಬಿಜೆಪಿ ನಾಯಕರು ಅರುಣ್ ಸೋಮಣ್ಣಗೆ ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
ಈ ನಿರ್ಧಾರ ಯಾಕೆ?
ಸೋಮಣ್ಣ ಪುತ್ರ ಅರುಣ್ ವಿಚಾರದಲ್ಲಿ ಬಿಜೆಪಿಯ ಈ ನಿರ್ಧಾರ, ಪಕ್ಷದಲ್ಲಿ ಲಿಂಗಾಯತರ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಆರೋಪಕ್ಕೆ ತೇಪೆ ಹಚ್ಚುವ ಯತ್ನವೆಂದು ಹೇಳಲಾಗುತ್ತಿದೆ. ಲಿಂಗಾಯತ ಮೀಸಲಾತಿ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ಸಡ್ಡು ಹೊಡೆದಿದ್ದ ಲಿಂಗಾಯತ ಸ್ವಾಮಿಗಳ ನಡೆ ಕುರಿತು ಬಿಜೆಪಿ ಹೈಕಮಾಂಡ್ ಬೇಸರ ವ್ಯಕ್ತಪಡಿಸಿತ್ತು. ಲಿಂಗಾಯತ ಮೀಸಲಾತಿ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸು ಪ್ರಯತ್ನಗಳಾಗುತ್ತಿದ್ದರೂ ಯಡಿಯೂರಪ್ಪ ಇದರ ಬಗ್ಗೆ ಯಾವುದೇ ಮಾತನ್ನಾಡಿರದಲಿಲ್ಲ. ಸಮುದಾಯವನ್ನೂ ಸಮಾಧಾನಪಡಿಸುವ ಗೋಜಿಗೂ ಹೋಗಿರಲಿಲ್ಲ. ಯಡಿಯೂರಪ್ಪರನ್ನು ಬದಿಗೆ ಸರಿಸಿ, ಲಿಂಗಾಯತರನ್ನು ತಾವೇ ಸಮಾಧಾನಪಡಿಸುವ ಯತ್ನಕ್ಕೆ ಬಿಜೆಪಿ ಮುಂದಾಗಿತ್ತು.
ಆದರೆ, ಪಕ್ಷದ ಈ ನಿರ್ಧಾರ ಅಂದುಕೊಂಡಂತೆ ಫಲ ನೀಡದ ಹಿನ್ನೆಲೆಯಲ್ಲಿ ಮತ್ತೆ ಲಿಂಗಾಯತರ ಅನಿವಾರ್ಯ ಓಲೈಕೆಗೆ ಬಿಜೆಪಿ ಮುಂದಾಗಿತ್ತು. ಅದಕ್ಕೆ ಸೂಕ್ತ ಅವಕಾಶ ಸಿಗದಾಗಿತ್ತು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಅರುಣ್ ನಡುವೆ ನಡೆದಿದ್ದ ಮಾತಿನ ಚಕಮಕಿ ಇಬ್ಬರ ನಡುವೆ ವೈಮನಸ್ಸು ಬೆಳೆಯುವಂತೆ ಮಾಡಿತ್ತು. ಇದರಿಂದ ನೊಂದ ಸೋಮಣ್ಣ ಪಕ್ಷ ತೊರೆಯುವ ಚಿಂತನೆ ಮಾಡಿದ್ದರು.
ಹೀಗಾಗಿ, ಮೊದಲೇ ಯಡಿಯೂರಪ್ಪ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ಲಿಂಗಾಯತರ ಅವಕೃಪೆಗೆ ಒಳಗಾಗಿದ್ದ ಬಿಜೆಪಿ ಮತ್ತೋರ್ವ ಲಿಂಗಾಯತ ನಾಯಕ ಸೋಮಣ್ಣ ಅವರನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾಗಿತ್ತು. ಸೋಮಣ್ಣರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕಸರತ್ತು ನಡೆಸಿದ ಬಿಜೆಪಿ ಹೈಕಮಾಂಡ್, ಸೋಮಣ್ಣ ಬೇಡಿಕೆ ಈಡೇರಿಸಿ, ಅರುಣ್ಗೂ ರಾಜಕೀಯವಾಗಿ ತಕ್ಕ ಅವಕಾಶ ಕಲ್ಪಿಸಿಕೊಟ್ಟಿದೆ. ವಿಜಯೇಂದ್ರರಂತೆ ಅರುಣ್ ಕೂಡ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಕ್ಷದೊಳಗೆ ಹಿಡಿತ ಸಾಧಿಸುವ ಅವಕಾಶ ಕೊಟ್ಟಿದೆ.