ಸಂಘಪರಿವಾರದ ಹೇಡಿಗಳ ಪಠ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಉಳಿಸುವುದಿಲ್ಲ. ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್ ಸೇರಿದಂತೆ ಪರಿವಾರದ ಎಲ್ಲ ಹೇಡಿಗಳ ಕುರಿತಾದ ಪಠ್ಯಗಳನ್ನು ಮಕ್ಕಳು ಅಭ್ಯಾಸ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಹೆಡ್ಗೇವಾರ್ ಒಬ್ಬ ರಣಹೇಡಿ. ಆತ ಸ್ವಂತಂತ್ರ ಹೋರಾಟಗಾರ ಎಂದು ಸಂಘಪರಿವಾರ ಸಾಬೀತು ಮಾಡಲಿ ನೋಡೋಣ. ಬ್ರಿಟೀಷರ ಬಳಿ ಕ್ಷಮಾಪಣೆ ಕೇಳಿದ ಸಾವರ್ಕರ್ನಂತಹ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಮನ್ನಣೆ ನೀಡಲಾಗದು” ಎಂದು ಅವರು ಹೇಳಿದ್ದಾರೆ.
“ರಾಜ್ಯದಲ್ಲಿ ಬಿಜೆಪಿ ಅನೈತಿಕ ಸರ್ಕಾರ ರಚನೆ ಮಾಡಿದ ಬಳಿಕ ರಾಜ್ಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಕೇಸರೀಕರಣ ಮಾಡಲು ಬಿಜೆಪಿ ಹುನ್ನಾರ ಹೆಣೆದಿತ್ತು. ಅದೆಲ್ಲವನ್ನೂ ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ” ಎಂದು ತಿಳಿಸಿದ್ದಾರೆ.