- ಮಾಜಿ ಮೇಯರ್ಗಳೊಂದಿಗೆ ಸಭೆ ನಡೆಸಿದ ಬೆಂಗಳೂರು ಅಭಿವೃದ್ದಿ ಸಚಿವ
- ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಅಭಿಪ್ರಾಯ,ಸಲಹೆ ಪಡೆದುಕೊಂಡ ಡಿಕೆಶಿ
ಬೆಂಗಳೂರು ನಗರವನ್ನು ಇನ್ನಷ್ಟು ಅಭಿವೃದ್ದಿ ಮಾಡುವ ಸಲುವಾಗಿ ಮಾಜಿ ಮೇಯರ್ ಗಳೊಂದಿಗೆ ಮಾತುಕತೆ ನಡೆಸಿ ಅವರ ಅಭಿಪ್ರಾಯ, ಸಲಹೆ ಪಡೆಯಲಾಗಿದೆ ಎಂದು ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರಾಗಿರುವ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಮಾಜಿ ಮೇಯರ್ಗಳ ಸಭೆ ಬಳಿಕ ಮಾತನಾಡಿದ ಅವರು, ಸಿಲಿಕಾನ್ ಸಿಟಿ ಅಭಿವೃದ್ಧಿಗಾಗಿ ಹೇಗೆ ಹಣ ಸಂಗ್ರಹ ಮಾಡಬಹುದು. ಎಲ್ಲಿ ನ್ಯೂನತೆಗಳಿವೆ, ತ್ಯಾಜ್ಯ ನಿರ್ವಹಣೆ, ರಸ್ತೆಗಳಲ್ಲಿ ಕಸ ಹಾಕುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೇವೆ. ಹಾಗೆಯೇ ಇವುಗಳನ್ನು ನಿರ್ವಹಣೆ ಬಗೆಗೂ ಸಲಹೆ ಪಡೆದಿದ್ದೇನೆ ಎಂದವರು ಹೇಳಿದರು.
ಕಸದ ವಾಹನ ಟ್ರ್ಯಾಕ್ ಮಾಡುವುದು, ಕಸವನ್ನು ಎಲ್ಲೆಂದರಲ್ಲಿ ಎಸೆಯುವ ವಾಹನಗಳಿಗೆ ಯಾವ ರೀತಿ ದಂಡ ವಿಧಿಸಬೇಕು, ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇನೆ. ಸದ್ಯದಲ್ಲೇ ಇದನ್ನು ನಿಯಂತ್ರಿಸಲು ಯಾವ ಸೂಚನೆ ನೀಡಬೇಕು ಎಂದು ಅಧಿಕಾರಿಗಳ ಜತೆ ಸಭೆ ಮಾಡಿ ತೀರ್ಮಾನಿಸುತ್ತೇನೆ.
ಸೋಮವಾರ ಬೆಂಗಳೂರು ನಗರದ ಸರ್ವಪಕ್ಷ ಶಾಸಕರ ಸಭೆ ಕರೆದಿದ್ದು, ಅವರಿಂದಲೂ ಸಲಹೆಗಳನ್ನು ಪಡೆಯುತ್ತೇನೆ. ನಂತರ ನಮ್ಮ ಪಕ್ಷದ ಶಾಸಕರ ಜತೆ ಪ್ರತ್ಯೇಕ ಸಭೆ ಮಾಡುತ್ತೇನೆ ಎಂದು ಡಿಕೆಶಿ ಹೇಳಿದರು.
ಈ ಸುದ್ದಿ ಓದಿದ್ದೀರಾ?:ಮಳೆಹಾನಿ | ಪರಿಹಾರ ಕ್ರಮ ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಸೂಚನೆ
ಇನ್ನು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟಿದರೆ ನೀಡುವ ಟ್ಯಾಕ್ಸ್ ವಿನಾಯಿತಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ದಿನಾಂಕದ ಒಳಗಾಗಿ ವಾರ್ಷಿಕ ತೆರಿಗೆ ಪಾವತಿ ಮಾಡಿದರೆ ಶೇ.5ರಷ್ಟು ಮರುಪಾವತಿ ಮಾಡಲಾಗುವುದು ಎಂದ ಶಿವಕುಮಾರ್, ಪಾಲಿಕೆ ವಾರ್ಡ್ ಮರುವಿಂಗಡಣೆ ವಿಚಾರವಾಗಿ ಚರ್ಚೆ ಮಾಡಿದ್ದು, ಇದಕ್ಕಾಗಿ ನೇಮಕ ಮಾಡಿರುವ ಸಮಿತಿ ಜತೆ ಚರ್ಚೆ ಮಾಡಿ ಮಾಹಿತಿ ಒದಗಿಸುವುದಾಗಿ ತಿಳಿಸಿದರು.