- ಈ ಬಾರಿ ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆ
- ಹುಟ್ಟೂರಿನಲ್ಲೇ ನನ್ನ ಕೊನೆಯ ಚುನಾವಣೆ ಎದುರಿಸುತ್ತೇನೆ
ಕಡೆಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಾಕ್ಷೇತ್ರದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ತಾವು ವರುಣಾ ಹಾಗೂ ಕೋಲಾರ ಕ್ಷೇತ್ರಗಳೆರಡರಿಂದಲೂ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಎಚ್ಡಿ ಕೋಟೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವರುಣಾ ಕ್ಷೇತ್ರದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು.
ವರುಣಾ ಕ್ಷೇತ್ರವೇ ನನ್ನ ಹುಟ್ಟೂರು. ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ ಇದೆ, ಹಾಗಾಗಿ ಇಲ್ಲಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಯಾವುದೇ ಒಂದು ಕ್ಷೇತ್ರ ಲಕ್ಕಿ ಹಾಗೂ ಅನ್ಲಕ್ಕಿ ಅಲ್ಲ. ನನಗೆ ಅದರ ಮೇಲೆ ನಂಬಿಕೆಯೂ ಇಲ್ಲ. ಕೋಲಾರ ಕ್ಷೇತ್ರದ ಜನರಿಂದ ಹೆಚ್ಚು ಒತ್ತಡ ಬರುತ್ತಿದೆ. ಹೀಗಾಗಿ ವರುಣಾ ಜತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡುತ್ತೇನೆ ಎಂದು ವಿಪಕ್ಷ ನಾಯಕರು ಹೇಳಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮ್ಯಾಚ್ ಫಿಕ್ಸ್ ಮಾಡಿಕೊಂಡಿತ್ತು. ಈ ಚುನಾವಣೆಯಲ್ಲೂ ಅದರ ಸಾಧ್ಯತೆ ಇದೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಇನ್ನು ಕಾಂಗ್ರೆಸ್ ಹೈಕಮಾಂಡ್ ಗಳ ಜತೆ ಮಾತನಾಡಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಹೈಕಮಾಂಡ್ ಜತೆಗೆ ಯಾರೂ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ. ಈ ಬಾರಿ ನಾವು ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೇವೆ ಎಂದರು.
ಈ ಸುದ್ದಿ ಓದಿದ್ದೀರಾ? :ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ | ಕೈ ನಾಯಕರ ಬಂಧನ: ಸಿಎಂ ಬೊಮ್ಮಾಯಿ
ಯಡಿಯೂರಪ್ಪ ನಿವಾಸದ ಮೇಲಿನ ಕಲ್ಲು ತೂರಾಟದ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬೊಮ್ಮಾಯಿಯವರು ಇದು ಕಾಂಗ್ರೆಸ್ನವರ ಕೃತ್ಯ ಎನ್ನುತ್ತಾರೆ. ಯಡಿಯೂರಪ್ಪನವರೇ ಕಾಂಗ್ರೆಸ್ ನವರು ಅಲ್ಲ ಅಂತ ಹೇಳಿದ್ದಾರೆ. ಯಡಿಯೂರಪ್ಪನವರಿಗಿಂತ ಬೊಮ್ಮಾಯಿಗೆ ಈ ವಿಚಾರ ಹೆಚ್ಚು ಗೊತ್ತೇ? ಎಂದು ಸಿದ್ದರಾಮಯ್ಯ ಸಿಎಂ ಪ್ರಶ್ನಿಸಿದರು.
ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಕೊಡಬೇಕಿತ್ತು. ಮೂರುವರೆ ವರ್ಷದಿಂದ ಈ ಬಗ್ಗೆ ಸುಮ್ಮನಿದ್ದ ಬಿಜೆಪಿ ಈಗ ಏನು ಮಾಡುತ್ತಿದೆ? ಎಂದ ಸಿದ್ದರಾಮಯ್ಯ ಒಳಮೀಸಲಾತಿ ನೀಡಲು ಕಾಂಗ್ರೆಸ್ ಒಲವು ತೋರಿಸಿತ್ತು ಎಂದರು.