- ವರಿಷ್ಠರ ಸಭೆ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ
- ‘ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವೆ‘
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಅದರಿಂದ ಹೊರಬರಲು ಹೊಸ ನಾಯಕನನ್ನು ಹುಡುಕಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ನಿಂತಿದೆ. ಇದಕ್ಕೆ ಪೂರಕವೆನ್ನುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೇಂದ್ರದ ವರಿಷ್ಠರು ನಿರ್ಧರಿಸುತ್ತಾರೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಪಕ್ಷ ಪುಟಿದು ನಿಲ್ಲಬೇಕಿದೆ. ಅದಕ್ಕಾಗಿನ ಅಗತ್ಯ ಕಾಯಕಲ್ಪ ಮಾಡಲಾಗುತ್ತದೆ. ರಾಜ್ಯದಲ್ಲಿ ಅತಿ ಶೀಘ್ರ ರಾಷ್ಟ್ರೀಯ ಪ್ರಮುಖರ ಸಭೆಯೊಂದಿದ್ದು, ಅಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ” ಎಂದು ಅವರು ಹೇಳಿದರು.
“ಪಕ್ಷದ ಸೋಲಿನ ಪರಾಮರ್ಶೆಯನ್ನು ಮಾಡಲಾಗುತ್ತಿದೆ. ಈ ಸೋಲು ಕೇವಲ ವ್ಯಕ್ತಿಯೊಬ್ಬರ ಸೋಲಲ್ಲ, ಇದರ ಹೊಣೆಯನ್ನು ಪಕ್ಷ ಹೊರುತ್ತದೆ. ಎಲ್ಲಿ ಏನು ತಪ್ಪಾಗಿದೆ ಎಂದು ನಾವು ವಿಮರ್ಶೆ ಮಾಡುತ್ತೇವೆ” ಎಂದು ಜೋಶಿ ಹೇಳಿದರು.
“ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಬೇರೆ, ಲೋಕಸಭೆ ಚುನಾವಣೆ ಬೇರೆ. ಬೇರೆ ಬೇರೆ ವಿಚಾರಗಳ ಮೇಲೆ ಈ 2 ಚುನಾವಣೆಗಳು ನಡೆಯುತ್ತವೆ. ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ 330ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ” ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಚುನಾವಣಾ ಸೋಲಿನ ಪರಾಮರ್ಶೆ ಮಾಡಿದ್ದೇವೆ: ಬಸವರಾಜ ಬೊಮ್ಮಾಯಿ
ಈ ಚುನಾವಣೆಯಲ್ಲಿನ ಬಿಜೆಪಿ ಸೋಲು ನಿಜಕ್ಕೂ ಬೇಸರ ತರಿಸಿದೆ. ಪಕ್ಷದ ಈ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಶ್ರಮ ವಹಿಸುತ್ತೇವೆ ಎಂದು ಅವರು ಹೇಳಿದರು.