ಫ್ರಾನ್ಸ್ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಮೋದಿಯವರು ಪ್ರಧಾನಿ ಹುದ್ದೆಯಲ್ಲಿರುವವರೆಗೂ ಭಾರತವನ್ನು ಮುಟ್ಟಲು ಯಾರಿಗೂ ಬಿಡುವುದಿಲ್ಲ” ಎಂದಿರುವ ಹೇಳಿಕೆಯನ್ನೇ ಭಾರತೀಯ ಮಾಧ್ಯಮಗಳು ಅತ್ಯಂತ ಪ್ರಮುಖ ಸುದ್ದಿಯನ್ನಾಗಿ ಬಿತ್ತರಿಸುತ್ತಿವೆ.
ಅಂತಾರಾಷ್ಟ್ರೀಯ ಒಪ್ಪಂದಗಳು ಮತ್ತು ರಕ್ಷಣೆ ಎಂಬುದು ಎರಡು ದೇಶಗಳ ನಡುವೆ ಇರಬೇಕಾದದ್ದು. ಆದರೆ ಟ್ರಂಪ್, “ಮೋದಿ ಇರುವವರೆಗೆ ಮಾತ್ರ ಭಾರತವನ್ನು ಮುಟ್ಟಲು ಬಿಡಲ್ಲ, ಬೇರೆಯವರು ಬಂದರೆ ನನಗೆ ಗೊತ್ತಿಲ್ಲ” ಎನ್ನುತ್ತಿದ್ದಾರೆ. ಅಂದರೆ, ಅಮೆರಿಕಕ್ಕೆ ಭಾರತ ದೇಶ ಮುಖ್ಯವಲ್ಲ, ಕೇವಲ ಮೋದಿ ಮುಖ್ಯ ಎಂಬಂತಿದೆ ಈ ಮಾತು.
ಒಂದೆಡೆ ಮೋದಿಯವರನ್ನು “ದೇವದೂತ”, “ಬಲಿಷ್ಠ” ಎಂದು ಅಮೆರಿಕ ಹೊಗಳುತ್ತಿದ್ದರೆ, ಮತ್ತೊಂದೆಡೆ ಅದೇ ಅಮೆರಿಕ ಭಾರತದ ಉತ್ಪನ್ನಗಳ ಮೇಲೆ 50% ರಷ್ಟು ಭಾರಿ ಸುಂಕ (Tariff) ಹೇರಿ ಭಾರತದ ಆರ್ಥಿಕತೆಗೆ ಪೆಟ್ಟು ನೀಡುತ್ತಿದೆ. ಅಂದರೆ, “ಹಣಕಾಸಿನ ವಿಷಯದಲ್ಲಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತೇವೆ, ಆದರೆ ಮಾತಿನಲ್ಲಿ ಮಾತ್ರ ನೀವೇ ನಮ್ಮ ಸ್ನೇಹಿತ” ಎನ್ನುವ ಟ್ರಂಪ್ ದ್ವಂದ್ವ ನಿಲುವು ಇಲ್ಲಿ ಎದ್ದು ಕಾಣುತ್ತದೆ.
ಇದನ್ನೂ ಓದಿ: ಸೈಬರ್ ವಂಚಕರು ಪರಾವಲಂಬಿಗಳು: ಸೈಬರ್ ವಂಚನೆ ವಿರುದ್ಧ ಬಿಗಿ ಕಾನೂನು ತರುವಂತೆ ಸುಪ್ರೀಂ ತಾಕೀತು
ಒಮಾನ್ ಸಮುದ್ರದಲ್ಲಿ ಅಮೆರಿಕ ನಡೆಸಿದ ದಾಳಿಗೆ ಭಾರತೀಯ ನಾವಿಕರು ಬಲಿಯಾಗಿದ್ದಾರೆ. ಇದು ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಗಂಭೀರ ವಿಷಯ. ಇದರ ಬಗ್ಗೆ ಅಮೆರಿಕವನ್ನು ಕಟುವಾಗಿ ಪ್ರಶ್ನಿಸಬೇಕಿದ್ದ ಮಾಧ್ಯಮಗಳು, ಆ ಗಂಭೀರ ಸಮಸ್ಯೆಯನ್ನು ಪಕ್ಕಕ್ಕಿಟ್ಟು, ಟ್ರಂಪ್ ಆಡಿದ ನಾಲ್ಕು ಹೊಗಳಿಕೆಯ ಮಾತುಗಳನ್ನೇ ದೇಶದ ದೊಡ್ಡ ಸಾಧನೆ ಎಂಬಂತೆ ಹೈಲೈಟ್ ಮಾಡುತ್ತಿರುವುದು ಭಾರತೀಯ ಮಾಧ್ಯಮ ರಂಗದ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಬಿಚ್ಚಿಟ್ಟಿದೆ.
ಈ ಇಡೀ ಪ್ರಸಂಗದಲ್ಲಿ ಅಮೆರಿಕದ ವ್ಯಾಪಾರೀ ಚಾತುರ್ಯ ಮತ್ತು ಭಾರತೀಯ ಮಾಧ್ಯಮಗಳ ಟಿಆರ್ಪಿ ಹಪಾಹಪಿತನ ಕಾಣುತ್ತಿದೆ.




