ಸೈಬರ್ ವಂಚಕರ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮುಗ್ಧ ನಾಗರಿಕರನ್ನು ವಂಚಿಸುವ ಇಂತಹ ಅಪರಾಧಿಗಳನ್ನು “ಪರಾವಲಂಬಿ ಕೀಟಗಳು” (parasites) ಎಂದು ಕರೆದಿರುವ ನ್ಯಾಯಾಲಯ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ತನ್ನ ಮೇಲಿರುವ ಹಲವು ಪ್ರಕರಣಗಳನ್ನು ಒಟ್ಟಿಗೆ ಸೇರಿಸಬೇಕು ಮತ್ತು ತನಗೆ ಜಾಮೀನು ನೀಡಬೇಕು ಎಂದು ಕೋರಿ ಸೈಬರ್ ವಂಚನೆ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದ ನ್ಯಾಯಾಲಯ, “ಇಂತಹ ಅಪರಾಧಿಗಳು ಜೈಲಿನ ಒಳಗಿದ್ದಾಗ ಮಾತ್ರ ಸಮಾಜದ ಹಿತಾಸಕ್ತಿಯನ್ನು ಉತ್ತಮವಾಗಿ ರಕ್ಷಿಸಲು ಸಾಧ್ಯ” ಎಂದು ಹೇಳಿದೆ.
“ನೀವೆಲ್ಲರೂ ಪರಾವಲಂಬಿ ಕೀಟಗಳು… ಹೂಡಿಕೆದಾರರಿಂದ ಹಣ ಪಡೆದು ಅವರಿಗೆ ವಂಚಿಸುತ್ತೀರಿ. ನಿಮ್ಮ ವಿಷಯದಲ್ಲಿ ನಾವು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ. ನೀವು ಜೈಲಿನ ಒಳಗಿದ್ದಾಗ ಮಾತ್ರ ಸಮಾಜ ಸುರಕ್ಷಿತವಾಗಿರುತ್ತದೆ, ಹೊರಗಿದ್ದಾಗ ಅಲ್ಲ,” ಎಂದು CJI ಸೂರ್ಯ ಕಾಂತ್ ನೇತೃತ್ವದ ಪೀಠವು ತರಾಟೆಗೆ ತೆಗೆದುಕೊಂಡಿತು.
ಬಿಹಾರ, ತಮಿಳುನಾಡು ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸೈಬರ್ ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಮನೋಜ್ ಕುಮಾರ್ ಸಿಂಗ್ ಎಂಬಾತ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ಈ ವರ್ಷದ ಆರಂಭದಲ್ಲಿ ಜಮ್ಮು ಮತ್ತು ತಮಿಳುನಾಡಿನ ತಿರುಪುರ್ ಪೊಲೀಸರು ಈತನ ವಿರುದ್ಧ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದರು.
ವಿವಿಧ ರಾಜ್ಯಗಳಲ್ಲಿ ತನ್ನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಮತ್ತು ಮುಂದೆಯೂ ಹೊಸ ಪ್ರಕರಣಗಳು ದಾಖಲಾಗುವ ಆತಂಕವಿದೆ ಎಂದು ಅರ್ಜಿದಾರ ಮನೋಜ್ ಕುಮಾರ್ ಕೋರ್ಟ್ಗೆ ತಿಳಿಸಿದ್ದಲ್ಲದೆ, ತನಗೆ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿದ್ದ.
ನ್ಯಾಯಮೂರ್ತಿ ವಿ. ಮೋಹನ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠವು ಸೈಬರ್ ವಂಚಕರ ಕಾರ್ಯವೈಖರಿಯನ್ನು ಗಮನಿಸಿ, “ಇವರು ಒಂದು ರಾಜ್ಯದಲ್ಲಿ ಅಪರಾಧ ಎಸಗಿ, ಬಂಧನದಿಂದ ತಪ್ಪಿಸಿಕೊಳ್ಳಲು ಮತ್ತೊಂದು ರಾಜ್ಯಕ್ಕೆ ಓಡಿಹೋಗುತ್ತಾರೆ. ನೀವು ದೇಶಾದ್ಯಂತ ಸಂತ್ರಸ್ತರನ್ನು ಹೊಂದಿರುವ ಸಾರ್ವಜನಿಕ ಅಪರಾಧಿಗಳು. ತಮಿಳುನಾಡಿನಲ್ಲಿ ಯಾರಿಗೋ ವಂಚಿಸಿ ನೇರವಾಗಿ ಜಮ್ಮು ಕಾಶ್ಮೀರಕ್ಕೆ ಓಡಿಹೋಗುತ್ತೀರಿ,” ಎಂದು ಸಿಜೆಐ ಹೇಳಿದರು. ಹಾಗಾಗಿ, ನ್ಯಾಯಾಲಯವು ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿ, ಸಂಬಂಧಪಟ್ಟ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತು.
ಇದನ್ನೂ ಓದಿ: ದೇಶದ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಒತ್ತಡ ಹೇರಿ ಭವಿಷ್ಯವನ್ನು ಹೊಸಕಿ ಹಾಕುತ್ತದೆ: ರಾಹುಲ್ ಗಾಂಧಿ
ಕಳೆದ ವರ್ಷ ಅಕ್ಟೋಬರ್ನಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವೇ ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ಹಾವಳಿಯ ಬಗ್ಗೆ ಸ್ವಯಂಪ್ರೇರಿತ (suo motu) ಗಮನ ಹರಿಸಿತ್ತು. ಈ ವಂಚನೆಯಲ್ಲಿ ಅಪರಾಧಿಗಳು ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ, ನಕಲಿ ಕೋರ್ಟ್ ಆದೇಶಗಳನ್ನು ತೋರಿಸಿ ಜನರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಾರೆ.
ಹರಿಯಾಣದ ಅಂಬಾಲಾದ 70 ವರ್ಷದ ವೃದ್ಧೆಯೊಬ್ಬರು ಬರೆದ ಪತ್ರದ ಆಧಾರದ ಮೇಲೆ ಕೋರ್ಟ್ ಈ ಕ್ರಮ ಕೈಗೊಂಡಿತ್ತು. ಸಿಬಿಐ (CBI), ಇಡಿ (ED) ಮತ್ತು ನ್ಯಾಯಾಂಗ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು ಆ ವೃದ್ಧ ದಂಪತಿಯಿಂದ ಸುಮಾರು ₹1.5 ಕೋಟಿ ರೂಪಾಯಿ ದೋಚಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದ್ದು, ತನಿಖಾ ಸಂಸ್ಥೆಗಳಿಗೆ ಮತ್ತಷ್ಟು ಬಲ ತುಂಬಲು ಕಠಿಣ ಆದೇಶಗಳನ್ನು ಹೊರಡಿಸುವುದಾಗಿ ನ್ಯಾಯಾಲಯ ಹೇಳಿದೆ. ಕೋರ್ಟ್ ಮಧ್ಯಪ್ರವೇಶದ ನಂತರ, ಹಲವು ರಾಜ್ಯಗಳು ಪ್ರಮುಖ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿವೆ.




