- ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಿಜೆಪಿ ಕಾರ್ಯಕರ್ತರು
- ಬಿಜೆಪಿ ಅಭ್ಯರ್ಥಿ ಎಂ ಕೃಷ್ಣಪ್ಪ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಜೋರಾಗಿದ್ದು, ಮತದಾರರು ತಮ್ಮ ಅಭ್ಯರ್ಥಿಯ ಪರ ಮತ ಹಾಕಲು ಮತಗಟ್ಟೆಯ ಹತ್ತಿರ ಬರುತ್ತಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಮತಗಟ್ಟೆಯಲ್ಲಿಯೇ ಕುಳಿತು ಕರಪತ್ರಗಳನ್ನು ಹಂಚಿ ಅಕ್ರಮ ಮತದಾನಕ್ಕೆ ಅನುವು ಮಾಡಿಕೊಡುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಶೋಕ್ ಮೃತ್ಯುಂಜಯ ಮಾಧ್ಯಮಗಳೊಂದಿಗೆ ಮಾತನಾಡಿ, “ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರು ಮತಗಟ್ಟೆಯಲ್ಲಿ ಕುಳಿತುಕೊಂಡು ಬಿಜೆಪಿಯ ಕರಪತ್ರಗಳನ್ನು ಹಂಚಿ ಅಕ್ರಮ ಮತದಾನಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ನನಗೆ ಈ ಘಟನೆ ನೋಡಿ ನಿಜಕ್ಕೂ ಆಶ್ಚರ್ಯವಾಯಿತು” ಎಂದಿದ್ದಾರೆ.
“ಇದು ಪ್ರಜಾಪ್ರಭುತ್ವ. ಚುನಾವಣೆ ಎಂದರೆ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ನಡೆಯಬೇಕು. ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಈ ನಡೆ ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂಬುದು ಎದ್ದು ಕಾಣುತ್ತದೆ. ಕೂಡಲೇ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತದಾನದ ದಿನ ವೇತನ ಸಹಿತ ರಜೆ ನಿರಾಕರಿಸಿದ ಖಾಸಗಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಬಿಬಿಎಂಪಿ
“ಕೂಡಲೇ ಬಿಜೆಪಿ ಅಭ್ಯರ್ಥಿ ಎಂ ಕೃಷ್ಣಪ್ಪ ರೆಡ್ಡಿರವರ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಈ ಮತಗಟ್ಟೆಯಲ್ಲಿ ಮರು ಮತದಾನ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.