ಮುಂಜಾನೆಯಿಂದ ನೆತ್ತಿ ಸುಡುವ ಬಿಸಿಲಿನ ಕಾವಿನಲ್ಲಿದ್ದ ಬೆಂಗಳೂರಿನಲ್ಲಿ ಸಂಜೆ ಮೂರರಿಂದ ದಿಢೀರ್ ಗುಡುಗು ಸಹಿತ ಆಲಿಕಲ್ಲು ಮಳೆ ಒಂದೇ ಸಮನೆ ಧಾರಕಾರವಾಗಿ ಸುರಿಯಿತು.
ಬಾನುವಾರ ವಾರಾಂತ್ಯವಾದ ಕಾರಣ ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತಿತ್ತು. ಆದರೆ, ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಷ್ಟ ಉಂಟಾಗಿದೆ. ವಾರಾಂತ್ಯದ ದಿನವನ್ನು ಹೊರಗೆ ಕಳೆಯಲು ಹೊರಟಿದ್ದ ನಾಗರಿಕರಿಗೆ ಮಳೆಯಿಂದಾಗಿ ಪೆಚ್ಚು ಮೋರೆ ಹಾಕುವಂತಾಗಿದೆ.
ಸೋಮವಾರವೂ ರಾಜ್ಯದಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮಳೆ ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಶನಿವಾರ ರಾತ್ರಿ ನಗರದಲ್ಲಿ 25 ಮಿ.ಮೀ ಮಳೆಯಾಗಿದ್ದು, ಉತ್ತರಹಳ್ಳಿ ಭಾಗದಲ್ಲಿ ಮಾತ್ರ 33 ಮಿ.ಮೀ ಮಳೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಾಮರಾಜಪೇಟೆ, ಅಶೋಕನಗರ, ಹಲಸೂರು, ಮೆಜೆಸ್ಟಿಕ್, ದೀಪಾಂಜಲಿ ನಗರ, ಕಾಮಾಕ್ಷಿಪಾಳ್ಯ, ಮಲ್ಲೇಶ್ವರ, ಶ್ರೀರಾಮಪುರ, ರಾಜಾಜಿನಗರ ಹಾಗೂ ವಿಜಯನಗರ, ಯಶವಂತಪುರ, ರಿಚ್ಮಂಡ್ ರಸ್ತೆ, ನಂಜಪ್ಪ ಸರ್ಕಲ್, ಜೆ ಪಿ ನಗರ, ಬನಶಂಕರಿ, ಶಾಂತಿನಗರ, ಚಾಮರಾಜಪೇಟೆ, ಲಗ್ಗೆರೆ ಸೇರಿದಂತೆ ಬೆಂಗಳೂರಿನ ಹಲವೆಡೆ ಆಲಿಕಲ್ಲು ಸಹಿತ ಗಾಳಿಮಳೆ ಆಗಿದೆ. ವಾಹನ ಸವಾರರು ಮತ್ತು ಪ್ರಯಾಣಿಕರು ಅಂಗಡಿಗಳ ಮಗ್ಗಲುಗಳಲ್ಲಿ, ಮೇಲ್ಸೇತುವೆಗಳ ಅಡಿಯಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯ ಕಂಡುಬಂದಿತು.
ಈ ಬಗ್ಗೆ ನೆಟ್ಟಿಗರು ಟ್ವೀಟ್ ಮಾಡಿದ್ದು, “ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ಇಂತಹ ಆಲಿಕಲ್ಲು ಮಳೆ ಎಂದು ಕಂಡಿರಲಿಲ್ಲ. ಭಾನುವಾರದ ಕ್ರಿಕೆಟ್ ಪಂದ್ಯ ಮರೆತು, ಮುಂದಾಗುವ ನಷ್ಟದ ಬಗ್ಗೆ ಚಿಂತಿಸಿ” ಎಂದು ಟ್ವೀಟ್ ಮಾಡಿದ್ದಾರೆ.
ಬಿರುಗಾಳಿಗೆ ಕೆಲವೆಡೆ ಮರಗಳು ಧರೆಗುರುಳಿವೆ. ಕುಮಾರಕೃಪಾ ರಸ್ತೆಯಲ್ಲಿ ಕಾರು ಹಾಗೂ ಆಟೊದ ಮೇಲೆ ಮರದ ರೊಂಬೆಗಳು ಬಿದ್ದಿದ್ದು ಪ್ರಯಾಣಿಕರು ಪಾರಾಗಿದ್ಧಾರೆ. ಮಳೆಯೊಂದಿಗೆ ದಟ್ಟೈಸಿದ ಮೋಡದಿಂದ ಮಧ್ಯಾಹ್ನವೇ ಕಗ್ಗತ್ತಲು ಆವರಿಸಿತ್ತು.
ಭಾನುವಾರ ಅರ್ಧಗಂಟೆಯಿಂದ ಸುರಿಯುತ್ತಿರುವ ಮಳೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ರಸ್ತೆಗಳು ನದಿಯಂತಾಗಿದೆ. ಮೇಲ್ಸೆತುವೆ ಬಳಿ ಆಶ್ರಯ ಪಡೆದಿದ್ದ ವಾಹನ ಸವಾರರು ಮಳೆ ನೀರಿನಲ್ಲೆ ನಿಂತು ಪರದಾಡುವಂತಾಗಿದೆ.
ಹೆಬ್ಬಾಳ, ಅಶೋಕ ನಗರ, ಆರ್ಟಿ ನಗರ, ಯಲಹಂಕ, ಮಲ್ಲೇಶ್ವರ, ಮೆಜೆಸ್ಟಿಕ್, ವಿಧಾನಸೌಧದ ಸುತ್ತಮುತ್ತ, ಸದಾಶಿವನಗರ, ಬಸವನಗುಡಿ, ಜಯನಗರ , ದೊಮ್ಮಲೂರು, ಹೊಸೂರು ರಸ್ತೆ ಭಾಗದಲ್ಲಿ ಅರ್ಧ ಗಂಟೆಯಿಂದ ನಿರಂತರ ಮಳೆಯಾಗುತ್ತಿದೆ.