ಪೋತುರಾಜುಲುಕ ಸಖತ್ ಕೋಪ ಬಂತು. ಎಲ್ಡು ನಿಮಿಷ ನನ್ನೆ ನೋಡಿದ ಮೇಲೆ ಹ್ಯೆಳ್ದ; "ನಿಮ್ ಅಪ್ಪ ನಿನ್ನ ಕಾಲೇಜ್ಕ ಹಾಕಿ ಹಾಳ್ ಮಾಡ್ದ. ಇಂದ್ಕಿತ್ತ ಕರಗಕ್ಕ ಬಾ. ನನ್ ಮೇಲೆ ಧರಮದೊರೇನೆ ಬತ್ತನ್ನಲ್ಲ, ಆಗ ನಿನ್ನ ಕ್ವಚ್ಚನ್ನುಗಳುಕ ಬದಲು ಸಿಕ್ತದೆ!"
ಚೈತ್ರ ಮಾಸು ಅಂದರೆ ನಮ್ ಊರ್ಕಡೆ ಕರಗದ್ದು ಮೇಳ ಬೆಲೆ ಜೋರು. ಪೋತುರಾಜುಲು ಹೇಳುವ ಭಾರುತು ಬೆಲೆ ಫೇಮಸ್ಸು. ಪಾಂಡು ಧರಮದೊರೆಗಳುಕ, ಕೌರವ ಅಧರಮದೊರೆಗಳುಕ ನಡದ ಯುದ್ಧ ನಿಪಾತಗಳು ಅವನ ಬಾಯಿಂದ ಕೇಳುವುದು ಬೆಲೆ ಸಂದಾಗಿರುತ್ತೆ. ಜನಗಳು ಅದ ಕೇಳಲು ತಮ್ಮೆಲ್ಲ ಪನಿಪಾಟ ಬಿಟ್ಟು ಅವನ ಸುತ್ತ ಗೇರಾಯಿಸಿ ನಿಂತಕತ್ತಿದ್ದರು. ಸಣ್ಣ ಇದ್ದಾಗ ನಾನೂ ಪೋತುರಾಜುಲು ಕಿಟ್ಟ ಭಾರುತು ಕೇಳಲು ಆಸೆ ಮಾಡ್ತಾ ಇದ್ದೆ. ಆಗೆಲ್ಲಾ ಅವನು ನಮಗೆ ಪಿಚ್ಚರ್ ಹೀರೋ.
ಹಿಂಗೇ ಒಂದ್ಕಿತ ಭಾರುತು ಕೇಳುವಾಗ ಒಬ್ಬಯ್ಯಮ್ಮ ಪೋನಾಗ ಮಾತಾಡಿದ್ದು ರಾಜುಲುಕ ಸರಿಕಾಣಲಿಲ್ಲ. ಸರಕ್ ಅಂತ ಮೈಮೇಲೆ ಧರಮರಾಜು ಬಂದು, ಆಯಮ್ಮನ ಮೇಲೆ ತಾರಾಡಿ ಮುಂದಲೆ ಹಿಡಿತು ಗೂರಾಡಿತು. ಆ ಟೈಮಾಗ ಯಾರೂ ಬಿಡಿಸುಕೂಡದು. ಎದುರುಗ ಇರುವ ಕುಂಕುಮವ ತೆಗೆದು ರಾಜುಲುಕ ಹಣೆಕ ಇಕ್ಕಿದರೆ ಗಪ್ಪನ ಸ್ವಾಮಲು ಶಾಂತ ಆಗ್ತಾರೆ. ಇಂತವು ನನಗ ಬೆಲೆ ಇಂಟ್ರೆಸ್ಟು. ದಿನಮಾನಗಳು ಹೋಗ್ತಾ-ಹೋಗ್ತಾ ಗ್ಯಾನು ಬಲ್ತು ಇವೆಲ್ಲವನ್ನೂ ಪುದು ತರ ನೋಡುವಂಗೆ ಆಯ್ತು ನನಗ.
ಈ ನುಡಿಗಟ್ಟು ಕೇಳಿದ್ದೀರಾ?: ದೇಸಿ ನುಡಿಗಟ್ಟು – ಹೊನ್ನಾಳಿ ಸೀಮೆ | ಸವಂತ್ಗಿ ಅಂದ್ರ ಸರ್ವೂತ್ನಾಗು ಬದ್ಕು
ವರು ಸಾರಿ ಪೋತುರಾಜುಲು ಕೆರೇಕಿಟ್ಟ ಹಸುಗಳು ಬಿಟ್ಟು ಬೀಡಿ ಕುಡಿತಾ ನಿಂತ್ಕಡಿದ್ದ. ನಾನು ಮುನೆಸ್ಪೂರಣ ಕೊಯಿಲಕ ಹೋಗಿ ಬರುವಾಗ ಅದೆ ಏರಿ ಮಾರ್ಗದಾಗ ಬರಬೇಕು. ಹಂಗೆ ಇವನು ಕಂಡ.
“ಎನ್ನಣ್ಣ ಪೋತನ್ನ!” ಅಂತ ಮಾತು ಕೊಟ್ಟೆ.
“ಓಹೋಹೋ! ಗಂಟೆ ಪೂಜಾರ್ಲು!” ಅಂತ ಅವನೂ ಕುಸಾಲು ಹೇಳಿದ.
ಹಂಗೆ ಹಿಂಗೆ ಮಾತು ಕೊಟ್ಟು ತಗೊಂಡು ಒಂದು ಟೈಂನಾಗ ನಾನು ಕೇಳಿದೆ. “ಅಲ್ಲಣ್ಣ, ನೀನು ಭಾರುತು ಹೇಳುವಾಗ ಪಾಂಡವರು ಧರಮದೊರೆಗಳು ಅಂತೀಯಾ…! ಅವರು ಎಷ್ಟು ಪಾಪಗಳು ಮಾಡವ್ರೆ ತಿಳಿದಾ ನಿನಗೆ?”
“ಏನಪ್ಪಾ ಅಂತ ಪಾಪಗಳು ಅವರು ಮಾಡಿರೋದು!” ಪೋತಣ್ಣ ಪಾಯಿಂಟ್ ಹಾಕ್ದ.
“ಮ್ಯಾಣದ ಮನೇಕ ಬೆಂಕಿ ಹಾಕಿದ್ದು ಯಾರು?”
“ಕೌರವರು…”
“ಅಲ್ಲ; ನೀ ಹೇಳುವ ಧರಮದೊರೆಗಳೇ!”
“ಹೇಂಗೆ?” ರಾಜುಲು ಮಕ ಕ್ವಚ್ಚನ್ ಮಾರ್ಕ್ ಆಯ್ತು.
“ಕೌರವರು ಹಾಕಬೇಕು ಅಂತಲೇ ಇದ್ದಿದ್ದು. ಅಷ್ಟರಾಗ ಇವರುಕ ವಾಸ್ನೆ ಹೊಡೆದು ಇವರೇ ಐದು ಜನ ಬೇಡರನ್ನ, ಒಬ್ಬ ಹೆಂಗಸನ್ನ ಹಿಡಿದು, ಕುಡಿಸಿ ಚಿತ್ತು ಮಾಡಿ ಬೆಂಕಿ ಹಾಕ್ಬುಟ್ರು…”
“ಲೇ ಲೇ ಲೇ… ಇದೇನೋ ತವ್ಳಿ ಕತೆ!” ಪೋತುರಾಜುಲುಕ ಗಾಬರಿ ಹೊಡೆದು ಬೆವರು ಕಿತ್ತುಬಿಡ್ತು.
“ತವ್ಳಿ ಅಲ್ಲ ಗಿವ್ಳಿ ಅಲ್ಲ. ಸತ್ಯು ಇದು!” ನಾನು ಪಟ್ಟು ಹಿಡಿದು ವಕಾಲತ್ ಮಾಡ್ದೆ.
ರಾಜುಲುಕ ಕೋಪ ಜುಟ್ಟುಗುಳುಕ ಹತ್ತಿಬಿಡ್ತು. ಮಕದಾಗ ನೆರಪು ಜರ್-ಜರ್ ಅಂತ ಭಗ್ ಅಂದುಬುಡ್ತು.
ನಾನು ಅಲ್ಲಿಕೆ ನಿಂತಕಂಡಿಲ್ಲ. ಮತ್ತೂ ಮುಂದಕ ಹೋದೆ.
“ಪೋತಣ್ಣ, ನಮ್ ಕುಲದೇವತೆ ದ್ರೌಪದಮ್ಮನ್ನ ಪಾಂಡುವರು ಮದುವಿ ಮಾಡಿಕಂಡು ಹಸ್ತಿನಾವತಿಕ ಬಂದ್ರು. ಕುರುಡು ರಾಜ ಈ ಅಣ್ಣ-ತಮ್ಮಗಳು ಕಿತ್ತಾಡಿ ಸಾಯ್ತವೆ ಅಂತ್ಯೋಳಿ ಖಾಂಡವಪ್ರಸ್ಥಕ ನೀವು ಹೋಗಿ ಸುಖಪಡಿ ಅಂತ ಪಾಂಡುವರುಕ ಹ್ಯೊಳ್ದ. ಇವರು ಹಂಗೆ ಅಲ್ಲಿಕ ಬಂದರು…”
“ಬಂದ್ರೋ ಇಲ್ಲೋ ಹ್ಯೊಳು…?”
“ಆಯ್ತು, ಬಂದ್ರು. ಮುಂದಕ ಒದರೋ ಗಂಟೆ ಪೂಜಾರಿ…”
ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಬೀದರ್ ಸೀಮೆ | ಯಾರ್ ಪ್ರಶ್ನೆ ಕೇಳ್ತಾರ ಅವರ್ ಸಾಯ್ತಾರ!
“ಹಂಗೆ ಬಂದವರು ನೆಟ್ಟಗೆ ಇರಬೇಕು ತಾನೇ? ಅದ್ಯಾಕ ಖಾಂಡವಪ್ರಸ್ಥ ಕಾಡನ್ನ ಸುಟ್ರು? ಅಲ್ಲಿ ಮನೆ ಮಾಡಿಕಂಡಿದ್ದ ಕಾಡುಜನಗಳು, ರುಶಿಜನಗಳು, ಪ್ರಾಣಿಗಳು, ಪಕ್ಷಿಗಳು, ಮರಗಳು, ಗಿಡಗಳು, ಬಳ್ಳಿ-ಪೊದೆಗಳು ಎಲ್ಲ ಸುಟ್ಟು ಸತ್ತೋದ್ವು. ಇದು ಯಾವ ಸೀಮೆ ಧರಮದೊರೆಗಳ ಧರಮ ಕಾರ್ಯಪ್ಪ? ಅಲ್ಲ… ಮಾತಕ ಕೇಳ್ತೀನಿ, ಅವರುಕ ಹಿಂಗೆ ಬೇಡ ಜನಗಳನ್ನ ಮ್ಯಾಣದ ಮನೆನಾಗ ತಾವು ತಪ್ಪಿಸಿಕೊಬೇಕು ಅಂತ ಸುಡೋವಾಗ, ಇದು ತೆಪ್ಪು ಅನಿಸಿಲ್ಲವ? ಇಲ್ಲಿ ಖಾಂಡವಪ್ರಸ್ಥನ ಸುಟ್ಟು ಏನ್ ಸಾಧಿಸಿದ್ರು? ಅಲ್ಲ, ಬೆಂಕಿ ಮಗಳನ್ನ ಮದುವಿ ಆಗಿದ್ದು ಹಿಂಗೆ ಕಾಡುಕ, ಕಾಡುಜನುಗಳುಕ ಬೆಂಕಿ ಹಾಕೋಕಾ? ಇದು ಅಧರಮ ಅನಿಸಿಲ್ಲವಾ? ಧರಮದೊರೆಗಳು ಎದೆನಾ ಇಷ್ಟು ಕಲ್ಮಾಡ್ಕಂಡರ!”
ಪೋತುರಾಜುಲುಕ ಸಖತ್ ಕೋಪ ಬಂತು. ಮೂಗನಾಗ ಉಸಿರಾಟ ಜೋರ್ ಆಯ್ತು. ಧಾಂ ದುಂ… ಧಾಂ ದುಂ… ಅಂತ ನಂತಾಕ ರಪ್ಪನೆ ಬಂದು ನಿಂತ್ಕಂಡ. ಎಲ್ಡು ನಿಮಿಷ ನನ್ನೆ ನೋಡಿದ ಮೇಲೆ ಹ್ಯೆಳ್ದ; “ನಿಮ್ ಅಪ್ಪ ನಿನ್ನ ಕಾಲೇಜ್ಕ ಹಾಕಿ ಹಾಳ್ ಮಾಡ್ದ. ಇಂದ್ಕಿತ್ತ ಕರಗಕ್ಕ ಬಾ. ನನ್ ಮೇಲೆ ಧರಮದೊರೇನೆ ಬತ್ತನ್ನಲ್ಲ, ಆಗ ನಿನ್ನ ಕ್ವಚ್ಚನ್ನುಗಳುಕ ಬದಲು ಸಿಕ್ತದೆ!”
ನನಗ ನಗು ಬಂತು. ಪೋತುರಾಜುಲು ನನ್ನ ಮಕ ನೋಡಿದ. ನನಗ ಆಗಲೇ ಹೊಳೆದುಬುಡ್ತು, ಅವನ ಮೈ ಮೇಲಿನ ಧರಮದೊರೆ ಹೇಳುವ ಬದಲು ಏನೂಂತ!
ಕಲಾಕೃತಿಗಳ ಕೃಪೆ: ಪೃಥ್ವಿರಾಜ್ ಚೌಧರಿ | ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ