ವರ್ಷದ ಹಿಂದೆ ರಾಜ್ಯದಲ್ಲಿ ಭುಗಿಲೆದ್ದು, ದೇಶದ ಗಮನ ಸೆಳೆದಿದ್ದ ಹಿಜಾಬ್ ವಿವಾದ ಮತ್ತು ಹೋರಾಟವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಹೆಚ್ಚು ಲಾಭ ನೀಡದು. ಎಸ್ಡಿಪಿಐ ಸ್ಪರ್ಧೆಯು ಕಾಂಗ್ರೆಸ್ ಗೆಲುವಿನ ಮೇಲೂ ಪರಿಣಾಮ ಬೀರದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಕಾಲೇಜು ತರಗತಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದರ ವಿರುದ್ಧ ಎಸ್ಡಿಪಿಐ ಅಭಿಯಾನ ನಡೆಸಿತ್ತು. ಅಭಿಯಾನದ ವೇಳೆ, ಮುಸ್ಲಿಂ ಯುವ ಸಮುದಾಯವು ಎಸ್ಡಿಪಿಐ ಜೊತೆಗೂಡಿದ್ದರು. ಅದರಲ್ಲೂ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಸ್ಡಿಪಿಐ ಅಭಿಯಾನವು ಮುಸ್ಲಿಂ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಹೀಗಾಗಿ, ಪ್ರಸ್ತುತ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಬೆಳ್ತಂಗಡಿ ಮತ್ತು ಕಾಪು ಕ್ಷೇತ್ರಗಳಲ್ಲಿ ಎಸ್ಡಿಪಿಐ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹಿಜಾಬ್ ವಿವಾದ ಬೆನ್ನಲ್ಲೇ, ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿ (2ಬಿ) ರದ್ದುಗೊಳಿಸಿದೆ. ಸರ್ಕಾರದ ಧೋರಣೆಯಿಂದ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಆ ಮೀಸಲಾತಿ ರದ್ದತಿಯನ್ನು ಸಮರ್ಥವಾಗಿ ವಿರೋಧಿಸಲು ಮತ್ತು ಮೀಸಲಾತಿಯನ್ನು ಮರಳಿ ತರಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯವೆಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಮುಸ್ಲಿಮರು ಹೆಚ್ಚಿರುವ ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ಎಸ್ಡಿಪಿಐ ಸ್ವಲ್ಪ ಮತಗಳನ್ನು ಗಳಿಸಬಹುದು. ಆದರೆ, ಅವರು ಕಾಂಗ್ರೆಸ್ನ ಭವಿಷ್ಯದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ರಾಜಕೀಯ ತಜ್ಞ ಪ್ರೊ. ಮುಜಾಫರ್ ಅಸ್ಸಾದಿ ಅಭಿಪ್ರಾಯಪಟ್ಟಿದ್ದಾರೆ.
ಈ ಸಮೀಕ್ಷಾ ವರದಿ ಓದಿದ್ದೀರಾ?: ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-2: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ
“ಹಿಜಾಬ್ ವಿವಾದ ಮತ್ತು ಅದರ ವಿರುದ್ಧದ ಹೋರಾಟದ ಬಲದ ಮೇಲೆ ಎಸ್ಡಿಪಿಐ ಚುನಾವಣೆ ಎದುರಿಸುತ್ತಿದೆ. ಹಿಜಾಬ್ ವಿವಾದ ಮುನ್ನೆಲೆಯಲ್ಲಿದ್ದ ಸಮಯದಲ್ಲಿ ಪಕ್ಷವು ಸಮುದಾಯದ ಭಾವನೆಗಳ ಜೊತೆಗೆ ನಿಂತು, ಹೋರಾಡಿದೆ. ಅದನ್ನು ನಿರಾಕರಿಸಲಾಗದು. ಆದರೆ, ಮೀಸಲಾತಿ ಕಳೆದುಕೊಳ್ಳುವ ಆತಂಕದಲ್ಲಿರುವ ಸಮುದಾಯವು, ಅದನ್ನು ಮರಳಿ ಪಡೆಯಲು ಹೋರಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಮುದಾಯಕ್ಕೆ ಮೀಸಲಾತಿಯನ್ನು ಮರಳಿ ನೀಡುವುದಾಗಿ ಈಗಾಗಲೇ ಕೈ ನಾಯಕರು ಭರವಸೆ ನೀಡಿದ್ದಾರೆ. ಮೀಸಲಾತಿಯನ್ನು ಮರಳಿ ಪಡೆಯಲು ಎಸ್ಡಿಪಿಐಗಿಂತ ಕಾಂಗ್ರೆಸ್ ಸಮರ್ಥವೆಂದು ಸಮುದಾಯ ಭಾವಿಸಿದೆ. ಅದಕ್ಕಾಗಿ, ಕಾಂಗ್ರೆಸ್ಗೆ ಬೆಂಬಲ ನೀಡುತ್ತದೆ,” ಎಂದು ಅವರು ಹೇಳಿದ್ದಾರೆ.
ಈ ಸಮೀಕ್ಷಾ ವರದಿ ಓದಿದ್ದೀರಾ?: ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-3: ಭ್ರಷ್ಟಾಚಾರ, ಅಸಮರ್ಥತೆಯೇ ತಿರಸ್ಕಾರಕ್ಕೆ ಪ್ರಧಾನ ಕಾರಣ
“ಸಮುದಾಯಕ್ಕಿದ್ದ 2ಬಿ ಮೀಸಲಾತಿಯನ್ನು ಮರಳಿ ಒದಗಿಸುವ ಭರವಸೆ ನೀಡುವ ಪಕ್ಷಕ್ಕೆ ಮತ ಹಾಕುತ್ತೇನೆ. ಜಾತ್ಯತೀತ ಮತಗಳನ್ನು ವಿಭಜಿಸದೆ, ಒಬ್ಬರನ್ನು ಬೆಂಬಲಿಸಿದರೆ, ಸಮುದಾಯಕ್ಕೆ ಲಾಭವಾಗುತ್ತದೆ” ಎಂದು ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ, ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಬಂಟ್ವಾಳದ ಅಸದ್ (ಹೆಸರು ಬದಲಿಸಲಾಗಿದೆ) ಹೇಳಿದ್ದಾರೆ.
“ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಶತ್ರುವನ್ನು ಎದುರಿಸಲು ಸಮುದಾಯವು ಒಗ್ಗೂಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ಅನ್ನು ಬೆಂಬಲಿಸಲಿದ್ದಾರೆ” ಎಂಣದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಈ ಸಮೀಕ್ಷಾ ವರದಿ ಓದಿದ್ದೀರಾ?: ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-4: ಭ್ರಷ್ಟಾಚಾರವೇ ಚುನಾವಣೆಯ ಪ್ರಧಾನ ಸಂಗತಿ