ಗದಗ ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ಯುವ ವ್ಯಾಪಾರಿಯ ಬಳಿ ನುಗ್ಗಿದ ಬಿಜೆಪಿ ಕಾರ್ಯಕರ್ತರು ನೀರು ಮತ್ತು ತಂಪು ಪಾನೀಯಾದ ಕಸಿದುಕೊಂಡಿದ್ದರು. ಪರಿಣಾಮ ವ್ಯಾಪಾರಿ ಅಪಾರ ನಷ್ಟ ಅನುಭವಿಸಿ, ಬಿಕ್ಕಿ-ಬಿಕ್ಕಿ ಅತ್ತಿದ್ದರು. ನಷ್ಟ ಅನುಭವಿಸಿದ ವ್ಯಾಪಾರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ 35 ಸಾವಿರ ರೂಪಾಯಿ ಪರಿಹಾರವಾಗಿ ನೀಡಿದ್ದಾರೆ.
ಗದಗದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. ಬಿಜೆಪಿ ಸಮಾವೇಶಕ್ಕೆ ಸಾವಿರಾರು ಜನರನ್ನು ಅಕ್ಕಪಕ್ಕದ ಊರುಗಳಿಂದ ಕರೆಸಲಾಗಿತ್ತು. ಬೇಸಿಗೆಯ ತಾಪಮಾನ ಹೆಚ್ಚಿದ್ದರೂ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ನೆರೆದಿದ್ದವರೂ ಬಾಯಾರಿಕೆಯಿಂದ ಹನಿ ನೀರಿಗಾಗಿ ಹಾತೊರೆಯುತ್ತಿದ್ದರು.
ಈ ವೇಳೆ, ಸಮೀರ್ ಎಂಬ ವ್ಯಾಪಾರಿ ತಂಪು ಪಾನೀಯಗಳನ್ನು ಮಾರಾಟ ಮಾಡಲೆಂದು ಸಮಾವೇಶದ ಸ್ಥಳಕ್ಕೆ ತನ್ನ ವಾಹನದಲ್ಲಿ ಆಗಮಿಸಿದ್ದರು. ಇದನ್ನು ಗಮನಿಸಿದ ಕೆಲ ಬಿಜೆಪಿ ಕಾರ್ಯಕರ್ತರು ಆತನ ಬಳಿಯಿದ್ದ ತಂಪು ಪಾನೀಯಗಳನ್ನು ಪಡೆದುಕೊಳ್ಳಲು ಮುಂದೆ ಧಾವಿಸಿದರು. ಇದನ್ನು ಕಂಡ ಜನ ಬಿಜೆಪಿ ಕಾರ್ಯಕರ್ತರು ತಮಗಾಗಿ ತಂಪು ಪಾನೀಯ ತಂದಿದ್ದಾರೆ ಎಂದು ಭಾವಿಸಿ, ವಾಹನದ ಮೇಲೇರಿ ಗಾಡಿಯಲ್ಲಿದ್ದ ಎಲ್ಲ ತಂಪು ಪಾನೀಯಗಳನ್ನು ಕೈಗೆ ಸಿಕ್ಕಷ್ಟು ಬಾಚಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ?: 2002ರ ಗುಜರಾತ್ ಗಲಭೆ ಆರೋಪಿಗಳೇಕೆ ಸರದಿಯಂತೆ ನ್ಯಾಯಾಲಯದಿಂದ ಬಿಡುಗಡೆಯಾಗುತ್ತಿದ್ದಾರೆ?
ನಷ್ಟ ಅನುಭವಿಸಿದ ಸಮೀರ್ ಕಣ್ಣೀರು ಹಾಕಿದ್ದರು. ಆ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಬಿಜೆಪಿವ ವಿರುದ್ಧ ಕಿಡಿಕಾರಿದ್ದರು. ಆತನಿಗೆ ಕಾಂಗ್ರೆಸ್ 20 ಸಾವಿರ ರೂ. ನೀಡಿತ್ತು.
ಈ ಬಳಿಕ, ಸಂಸದ ಪ್ರತಾಪ್ ಸಿಂಹ ಭಾನುವಾರ ಸಮೀರ್ಗೆ ಕರೆ ಮಾಡಿ, 35 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಸಮೀರ್ಗೆ ಹಣ ನೀಡಿರುವುದಾಗಿ ಪ್ರತಾಪ್ ಸಿಂಹ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.