ತುಳು ಭಾಷೆಯನ್ನು ರಾಜ್ಯದ ಎರಡನೆಯ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ನಾವು ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಘೋಷಿಸಿದ್ದಾರೆ. ಈ ಮೂಲಕ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಈ ಮಾಹಿತಿ ನೀಡಿದರು. ಈ ಸಂದರ್ಭದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯನ್ನಾಗಿ ಬದಲಾಯಿಸುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬದಲಾಗಿ ಮಂಗಳೂರು ಜಿಲ್ಲೆಯಾಗಿ ಘೋಷಿಸಲು ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು. ಜನಾಭಿಪ್ರಾಯ ಮುಖ್ಯವಾಗುತ್ತದೆ. ಒಂದು ತಿಂಗಳಲ್ಲಿ ಈ ಸಂಬಂಧ ನೋಟಿಫಿಕೇಷನ್ ಸಿದ್ಧಪಡಿಸಿ ಜನರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ತುಳು ನುಡಿಗೆ ‘ಹೆಚ್ಚುವರಿ ಅಧಿಕೃತ ಭಾಷೆ’ ಮಾನ್ಯತೆ ಘೋಷಿಸಿ: ಕರವೇ ಆಗ್ರಹ
ಯು ಟಿ ಖಾದರ್ ಅವರು ಸ್ಪೀಕರ್ ಆಗಿದ್ದಾಗ ಮೊದಲು ಬಂದ ಪ್ರಶ್ನೆ ತುಳು ಭಾಷೆಗೆ ಸಂಬಂಧಿಸಿದಂತೆ ಆಗಿದೆ. ಇಲ್ಲಿನ ಶಾಸಕರು, ಖಾದರ್ ಅವರು ಸೇರಿ ತುಳು ಭಾಷೆ ಅಧಿಕೃತ ಭಾಷೆಯನ್ನಾಗಿ ಮಾಡಲು ನಮ್ಮ ಮೇಲೆ ಒತ್ತಡ ಹೆಚ್ಚಿಸಿದರು ಎಂದರು.
ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿ ಸಂಬಂಧ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿವರವಾಗಿ ತಿಳಿಸಲಾಗುವುದು. ಮಲೆನಾಡು ಮತ್ತು ಕರಾವಳಿ ಪ್ರದೇಶ ಒಳಗೊಂಡಂತೆ ಪ್ರವಾಸೋದ್ಯಮ ನೀತಿ ಮಾಡಲಾಗುವುದು. ಮುಖ್ಯವಾಗಿ ಮೂಲಸೌಕರ್ಯ ನೀತಿ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗುವುದು. ಮೆರಿನ್ ಸಂಬಂಧಿಸಿದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು, ಸೀಟುಗಳನ್ನು ಇನ್ನೂರಕ್ಕೆ ಏರಿಸಲಾಗುವುದು. ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆ ಆಗಬೇಕು ಎಂಬ ಒತ್ತಾಯವಿದೆ. ಈ ಸಂಬಂಧ ಉಳಿದ ಮಾಹಿತಿಯನ್ನು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ತಿಳಿಸುತ್ತಾರೆ ಎಂದರು.




