ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ, ಮುಂಬರುವ ಉಪಚುನಾವಣೆಗಾಗಿ ಪಕ್ಷದ ಹೆಸರು ಮತ್ತು ‘ಎರಡು ಎಲೆ-ಹುಲ್ಲು’ ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿರುವ ಕೇಂದ್ರ ಚುನಾವಣಾ ಆಯೋಗದ (ಇಸಿಐ) ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತೃಣಮೂಲ ಕಾಂಗ್ರೆಸ್ ನಾಯಕಿ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರವಾಗಿ ನಿಂತಿರುವ ಕಾಂಗ್ರೆಸ್, ಚುನಾವಣಾ ಆಯೋಗವು ಕೇಂದ್ರದ ಬಿಜೆಪಿ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಮೋದಿಗೆ ಇಸಿಯಿಂದ ‘ಬರ್ತ್ಡೇ ಗಿಫ್ಟ್’ ಇದಾಗಿದೆ ಎಂದು ಆರೋಪಿಸಿದೆ.
ಆಯೋಗದ ಈ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಕಟುವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್, “ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿರುವುದು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ತಡರಾತ್ರಿಯ ಹುಟ್ಟುಹಬ್ಬದ ಉಡುಗೊರೆಯಾಗಿದೆ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ | ಓವೈಸಿಯೊಂದಿಗೆ ಕೈಜೋಡಿಸಿದ ಮಾಜಿ ಟಿಎಂಸಿ ನಾಯಕ
ಬಿಜೆಪಿಯು ಸಂವಿಧಾನಬಾಹಿರವಾಗಿ ಪಕ್ಷಗಳನ್ನು ಹೈಜಾಕ್ ಮಾಡುತ್ತಿದೆ ಎಂದಿರುವ ಅವರು, “ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಬಿಜೆಪಿಯ ವಿರುದ್ಧ ಹೋರಾಡಿದವರಿಗೆ, ಈಗ ಅವರ ವಿರುದ್ಧವೇ ಬಂಡಾಯ ಎದ್ದು ಪಕ್ಷಾಂತರ ಮಾಡಲು ಚುನಾವಣಾ ಆಯೋಗವು ಕೆಂಪು ಕಾರ್ಪೇಟ್ ಹಾಸಿ ನೆರವಾಗುತ್ತಿದೆ. ಶಿವಸೇನೆ ಮತ್ತು ಎನ್ಸಿಪಿ ವಿಷಯದಲ್ಲಿ ಮಾಡಿದ್ದನ್ನೇ ಈಗ ಟಿಎಂಸಿ ವಿಷಯದಲ್ಲೂ ಪುನರಾವರ್ತಿಸಲಾಗಿದೆ. ಬಿಜೆಪಿಯನ್ನು ಯಾರು ವಿರೋಧಿಸುತ್ತಾರೋ ಅವರ ರಾಜಕೀಯ ಅಸ್ತಿತ್ವವನ್ನೇ ಕಸಿದುಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. ತಕ್ಷಣವೇ ಮಮತಾ ಬ್ಯಾನರ್ಜಿ ಅವರಿಗೆ ಚಿಹ್ನೆಯನ್ನು ಮರುನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಬಣ ಹಾಗೂ ಋತಬ್ರತ ಬ್ಯಾನರ್ಜಿ ನೇತೃತ್ವದ ಮತ್ತೊಂದು ಬಣಗಳ ನಡುವೆ ಪಕ್ಷದ ಅಧಿಕಾರ ಹಾಗೂ ಚಿಹ್ನೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 16ರ ನಾಮಪತ್ರ ಸಲ್ಲಿಕೆಯ ಗಡುವಿನ ಬಳಿಕ ವಿಚಾರಣೆ ನಡೆಸಿದ ಚುನಾವಣಾ ಆಯೋಗವು, ಯಾವುದೇ ಬಣಕ್ಕೂ ಟಿಎಂಸಿ ಹೆಸರು ಹಾಗೂ ಚಿಹ್ನೆಯನ್ನು ಬಳಸಲು ಅವಕಾಶ ನೀಡದೆ ಮಧ್ಯಂತರ ಆದೇಶ ಹೊರಡಿಸಿ ಫ್ರೀಜ್ ಮಾಡಿದೆ.




