ಫಾರ್ಮುಲಾ ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ಎಸ್ ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಟಿ. ರಾಮಾರಾವ್ (ಕೆಟಿಆರ್) ಅವರು ಹೈದರಾಬಾದ್ನ ನಂಪಲ್ಲಿಯಲ್ಲಿರುವ ಎಸಿಬಿ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ನ್ಯಾಯಾಲಯವು ದೋಷಾರೋಪ ಪಟ್ಟಿಯನ್ನು ಪರಿಗಣಿಸಿ ನೀಡಿದ್ದ ಸಮನ್ಸ್ ಹಿನ್ನೆಲೆಯಲ್ಲಿ ಕೆಟಿಆರ್ ಹಾಗೂ ಪ್ರಕರಣದ ಇತರ ಆರೋಪಿಗಳಾದ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಸೇರಿದಂತೆ ಇತರರು ನ್ಯಾಯಾಲಯದ ಎದುರು ಹಾಜರಾಗಿದ್ದಾರೆ.
ಇದನ್ನೂ ಓದಿ: ಬಿಆರ್ಎಸ್ ನಾಯಕ ಕೆಟಿಆರ್ ಸೇರಿದಂತೆ 8 ನಾಯಕರಿಗೆ ‘ಗೃಹಬಂಧನ’
ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಟಿಆರ್, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವು ರಾಜಕೀಯ ಪ್ರೇರಿತವಾಗಿದ್ದು, ಇದು ಆಡಳಿತಾರೂಢ ಸರ್ಕಾರ ಮಾಡುತ್ತಿರುವ ‘ದುರುದ್ದೇಶಪೂರಿತ ಪ್ರಚಾರ’ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
2023ರಲ್ಲಿ ಹೈದರಾಬಾದ್ನಲ್ಲಿ ನಡೆದ ಫಾರ್ಮುಲಾ ಇ ರೇಸ್ ಆಯೋಜನೆಯಲ್ಲಿ ಹಾಗೂ ಮುಂದಿನ ರೇಸ್ಗಳಿಗಾಗಿ ಸುಮಾರು ₹55 ಕೋಟಿಗೂ ಅಧಿಕ ಹಣವನ್ನು ಹೈದರಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಎಚ್ಎಂಡಿಎ) ಲಂಡನ್ ಆಧಾರಿತ ಸಂಸ್ಥೆಗೆ ನಿಯಮಾವಳಿಗಳನ್ನು ಮೀರಿ ವರ್ಗಾಯಿಸಲಾಗಿದೆ ಎಂದು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರೋಪಿಸಿದೆ. ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಕೆಟಿಆರ್ ಅವರ ನಿರ್ದೇಶನದ ಮೇಲೆಯೇ ಈ ಹಣ ವರ್ಗಾವಣೆಯಾಗಿದೆ ಎಂದು ಎಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಈ ಪ್ರಕರಣ ಸಂಬಂಧ ಕೋರ್ಟ್ಗೆ ಹಾಜರಾದ ಕೆಟಿಆರ್ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ತಮ್ಮ ಹಾಗೂ ಬಿಆರ್ಎಸ್ ನಾಯಕರ ತೇಜೋವಧೆ ಮಾಡಲು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ನಗರದ ಜಾಗತಿಕ ಇಮೇಜ್ ಹೆಚ್ಚಿಸಲು ಮತ್ತು ಹೂಡಿಕೆ ಆಕರ್ಷಿಸಲು ಪಾರದರ್ಶಕವಾಗಿಯೇ ಫಾರ್ಮುಲಾ ಇ ರೇಸ್ ಆಯೋಜಿಸಲಾಗಿತ್ತು, ಇದರಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣವನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಮತ್ತು ಸತ್ಯ ಶೀಘ್ರದಲ್ಲೇ ಹೊರಬರಲಿದೆ ಎಂದು ಕೆಟಿಆರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




