ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಸಾವಿರಾರು ಮತದಾರರ ಹೆಸರುಗಳ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. 34,355 ಮತದಾರರು ಕರಡು ಪಟ್ಟಿಯಿಂದ ಹೊರಕ್ಕೆ ಬಿದ್ದಿದ್ದಾರೆ. ಕೇವಲ ಮೂರು ತಿಂಗಳ ಹಿಂದೆ ನಡೆದ ಉಪಚುನಾವಣೆ ವೇಳೆ ಮತ ಚಲಾಯಿಸಿದ್ದ ಹಲವರ ಹೆಸರುಗಳು ಈಗ ಮತದಾರರ ಪಟ್ಟಿಯಿಂದ ಕಾಣೆಯಾಗಿರುವುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ಏಪ್ರಿಲ್ನಲ್ಲಿ ನಡೆದ ಉಪಚುನಾವಣೆ ವೇಳೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 2,59,797 ಮತದಾರರಿದ್ದರು. ಆದರೆ, ಜೂನ್ 16ರಿಂದ ಆರಂಭವಾದ ಎಸ್ಐಆರ್ ಪ್ರಕ್ರಿಯೆಯಲ್ಲಿ ಕೇವಲ 2,47,563 ಮತದಾರರಿಗೆ ಮಾತ್ರ ಗಣತಿ ನಮೂನೆ (Enumeration Form) ವಿತರಿಸಲಾಗಿದೆ. ಅಂದರೆ, 12,234 ಮತದಾರರ ಹೆಸರುಗಳು ಎಸ್ಐಆರ್ ಆರಂಭಕ್ಕೂ ಮುನ್ನವೇ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಡಿಲೀಟ್ ಮಾಡಲಾದ ಹೆಸರುಗಳಲ್ಲಿ 1,027 ಮೃತರು, 781 ಗೈರು, 800 ನಕಲಿ, 8,465 ಸ್ಥಳಾಂತರಗೊಂಡವರು ಹಾಗೂ 1,161 ಇತರೆ ಕಾರಣಗಳು ಎಂದು ದಾಖಲಾಗಿದೆ. ವಿಶೇಷವೆಂದರೆ, ಈ ಪೈಕಿ ಬಹುತೇಕ ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿರುವುದಾಗಿ ತಿಳಿದುಬಂದಿದೆ.
ಇದಕ್ಕೂ ಮೀರಿ ಎಸ್ಐಆರ್ ಪ್ರಕ್ರಿಯೆಯಲ್ಲಿಯೇ 3,858 ಗೈರು, 21,400 ಸ್ಥಳಾಂತರಗೊಂಡವರು, 6,037 ಮೃತರು, 2,877 ನಕಲಿ ಹಾಗೂ 183 ಇತರೆ ಸೇರಿ ಒಟ್ಟು 34,355 ಮತದಾರರನ್ನು ಎಸ್ಎಸ್ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ. ಇವರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಬಾಗಲಕೋಟೆ ಮುಳುಗಡೆ ಪ್ರದೇಶದ ಸಾವಿರಾರು ಕುಟುಂಬಗಳು ನವನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸ್ಥಳಾಂತರಗೊಂಡಿವೆ. ಆದರೆ, ಸರ್ಕಾರದಿಂದ ನಿವೇಶನ, ಪರಿಹಾರ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಮುಳುಗಡೆ ಪ್ರದೇಶದ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನೇ ಸಾಕ್ಷಿಯಾಗಿ ಕೇಳಲಾಗುತ್ತಿರುವ ಕಾರಣ, ಅನೇಕರು ವಾಸಸ್ಥಳ ಬದಲಾದರೂ ತಮ್ಮ ಮತದಾರರ ಹೆಸರನ್ನು ಮೂಲ ಕ್ಷೇತ್ರದಲ್ಲಿಯೇ ಉಳಿಸಿಕೊಂಡಿದ್ದಾರೆ.
ಈ ವಾಸ್ತವ ಪರಿಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸದ ಪರಿಣಾಮ, ಈಗಾಗಲೇ 29,865 ಸ್ಥಳಾಂತರಗೊಂಡ ಮತದಾರರು ಎಂಬ ಅಂಕಿ ದಾಖಲಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ವಿಷಯವಾಗಿ ಈದಿನ.ಕಾಮ್ ಜೊತೆಗೆ ನವನಗರ ನಿವಾಸಿ ಮಲ್ಲಪ್ಪ ಕೋರಿ, “ಮೂರು ತಿಂಗಳ ಹಿಂದಷ್ಟೇ ಉಪಚುನಾವಣೆಯಲ್ಲಿ ಮತ ಚಲಾಯಿಸಿದ್ದೆ. ಈಗ ನನ್ನ ಹೆಸರೇ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದಕ್ಕೆ ಯಾರೂ ಸ್ಪಷ್ಟ ಉತ್ತರ ನೀಡುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಾಗಲಕೋಟೆ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ, “ಎಸ್ಐಆರ್ನಲ್ಲಿ ಸ್ಥಳಾಂತರಗೊಂಡವರ ವಿಭಾಗದಲ್ಲಿ ಬಂದಿರುವ ಎಲ್ಲ ಅರ್ಜಿಗಳನ್ನು ಮರುಪರಿಶೀಲಿಸಲಾಗುವುದು. ಯಾವುದೇ ಅರ್ಹ ಮತದಾರರ ಹೆಸರು ಅನಗತ್ಯವಾಗಿ ಕೈಬಿಡದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಮೂರು ತಿಂಗಳ ಅಂತರದಲ್ಲಿ ಮತದಾರರ ಪಟ್ಟಿಯಲ್ಲಿ ಕಂಡುಬಂದ ಈ ಭಾರೀ ವ್ಯತ್ಯಾಸ, ಎಸ್ಐಆರ್ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಪರಿಶೀಲನಾ ಕ್ರಮಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅಂತಿಮ ಕರಡು ಪ್ರಕಟವಾಗುವ ಮುನ್ನ ಸಮಗ್ರ ಮರುಪರಿಶೀಲನೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



