ಸಿಂಧನೂರು ನಗರದ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದ ವೇಳೆ ಬೀಗ ಮುರಿದು ಚಿನ್ನ ಮತ್ತು ಬೆಳ್ಳಿ, ಆಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಅಂತರರಾಜ್ಯ ಕಳ್ಳನೊಬ್ಬನನ್ನು ಬಂಧಿಸಿ ₹ 25.50 ಲಕ್ಷದ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಸಿಂಧನೂರು ತಾಲ್ಲೂಕಿನ ಲಕ್ಷ್ಮೀಕ್ಯಾಂಪ್ನ ನಿವಾಸಿ ಎಸ್.ಶ್ರೀನಿವಾಸ ಅವರು ಕಳೆದ ಆಗಸ್ಟ್ 29 ರಂದು ಸಂಜೆ 5 ಗಂಟೆಗೆ ಮನೆಗೆ ಬೀಗ ಹಾಕಿ ವೈಯಕ್ತಿಕ ಕಾರ್ಯಕ್ರಮಕ್ಕೆ ಊರಿಗೆ ತೆರಳಿದ್ದರು. ಆ.31 ರಂದು ರಾತ್ರಿ ಹಿಂದಿರುಗಿದಾಗ ಮನೆಯ ಬೀಗ ಮುರಿದಿರುವುದು ಕಂಡು ಬಂದಿತ್ತು. ಮನೆಯ ಬೆಡ್ ರೂಂನಲ್ಲಿದ್ದ ತಿಜೋರಿ ಬೀಗವನ್ನು ಮುರಿದು ಅದರಲ್ಲಿದ್ದ 79 ಗ್ರಾಂ ಚಿನ್ನಾಭರಣ, 980 ಗ್ರಾಂ. ಬೆಳ್ಳಿ ಆಭರಣ ಹಾಗೂ ₹ 3.14 ಲಕ್ಷ ನಗದು ಕಳ್ಳತನವಾಗಿತ್ತು.
ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಲು ಗಿರಿ ಅವರು ಸಿಂಧನೂರು ಡಿ.ವೈ.ಎಸ್.ಪಿ. ಚಂದ್ರಶೇಖರ ನಾಯಕ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಪೊಲೀಸ್ ಅಧೀಕ್ಷಕ ಜಿ.ಹರೀಶ, ಗ್ರಾಮೀಣ ಸರ್ಕಲ್ ಇನ್ಸ್ಪೆಕ್ಟರ್ ವಿನಾಯಕ, ತುರ್ವಿಹಾಳ ಪಿ.ಎಸ್.ಐ.ಸುಜಾತಾ, ಸಿಬ್ಬಂದಿ ಗೋಪಾಲ, ಅಫೀಜ್, ಅನಿಲ್, ದ್ಯಾಮಣ್ಣ, ಅಮರೇಶ, ತಿಪ್ಪಣ್ಣ ಅವರ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಣಕು ಮಂಡಲದ ಪೈಡಿಪುರ ನಿವಾಸಿ ಬಂಡಿ ದುರ್ಗಾಪ್ರಸಾದ ಅಲಿಯಾಸ ದೊಂಗನಾನಿ (34) ಎಂಬುವವರನ್ನು ಸೆ.12 ರಂದು ಬಂಧಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಹಾಗೂ ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು. ವಿಚಾರಣೆ ವೇಳೆ 5 ಪ್ರಕರಣಗಳಲ್ಲಿ ತಾನೇ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಶಕಗಳಿಂದ ಬಸ್ ಸಂಪರ್ಕ ಕಾಣದ ಕೋಳೂರು: 4 ಕಿಮೀ ನಡದೇ ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು
ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.




