ಹೆಬ್ಬಾಳು ಏತ ನೀರಾವರಿ ಯೋಜನೆ ಅನುಷ್ಠಾನಗೊಂಡರೆ ನನಗೆ ಹೆಸರು ಬರುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಎಚ್.ಕೆ ಸುರೇಶ್ ಏತ ನೀರಾವರಿ ಯೋಜನೆಯನ್ನು ತಡೆಹಿಡಿಸಿದರು ಎಂದು ಶಾಸಕ, ಜೆಡಿಎಸ್ ಕೆ.ಎಸ್ ಲಿಂಗೇಶ್ ಆರೋಪಿಸಿದ್ದಾರೆ
ಬೇಲೂರಿನಲ್ಲಿ ಶನಿವಾರ ಮತಯಾಚನೆ ಹಾಗೂ ರೋಡ್ ಶೋ ನಡೆಸಿ ಮಾತನಾಡಿದ ಅವರು, “ಯೋಜನೆಗೆ ₹194 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ನಲ್ಲಿ ಅನುಮೋದನೆ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಅದನ್ನು ತಡೆಹಿಡಿಸಿದರು. ನಾನು ಶಾಸಕನಾಗಿ ಪುನಃ ಆಯ್ಕೆಯಾದರೆ ಇನ್ನು ಮೂರು ತಿಂಗಳಲ್ಲಿ ಈ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುವುದು” ಎಂದು ಹೇಳಿದರು.
“ಕಾಡಾನೆ ದಾಳಿಗೆ ಬಲಿಯಾದವರಿಗೆ ₹25 ಲಕ್ಷ ಪರಿಹಾರ ನೀಡುವಂತೆ ವಿಧಾನಸಭೆಯಲ್ಲಿ ನಾನು ಧ್ವನಿ ಎತ್ತಿದ್ದೆ. ಪರಿಣಾಮವಾಗಿ ₹7 ಲಕ್ಷವಿದ್ದ ಪರಿಹಾರವನ್ನು ₹15 ಲಕ್ಷಕ್ಕೆ ಹೆಚ್ಚಿಸಲಾಯಿತು” ಎಂದರು.
“₹1800 ಕೋಟಿ ಅನುದಾನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದು, ಪಟ್ಟಣದ ಹೋಳೆಬೀದಿಯ ಯುಜಿಡಿ ಭಸ್ಮಿಕರಣ ಹೊಂಡವನ್ನು ₹14 ಕೋಟಿ ವೆಚ್ಚದಲ್ಲಿ ನವೀಕರಣ ಗೊಳಿಸಲಾಗುತ್ತಿದೆ. ನಗರೋತ್ಥಾನ ಯೋಜನೆಯಲ್ಲಿ ಪಟ್ಟಣಕ್ಕೆ ₹8 ಕೋಟಿ ಅನುದಾನ ನೀಡಲಾಗಿದೆ” ಎಂದರು.
“ಹೊಳೆಬೀದಿ ಅಭಿವೃದ್ದಿ ಪಡಿಸುವ ಉದ್ದೇಶದಿಂದ ಸೇತುವೆ ನಿರ್ಮಿಸಲು ₹24 ಕೋಟಿ ಟೆಂಡರ್ ಅಗಿದೆ. ಈ ರಸ್ತೆಗೆ ಕನಕ ಮಾರ್ಗ ಎಂದು ಹೆಸರಿಟ್ಟು, ಕನಕ ಪುತ್ಥಳಿ ನಿರ್ಮಿಸಲಾಗುವುದು. 10 ಸಮುದಾಯದವರಿಗೆ ಸಮುದಾಯ ಭವನ ನಿರ್ಮಿಸಲು ನಿವೇಶನ ಮತ್ತು ಅನುದಾನ ನೀಡಿದ್ದೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಶೇ.80ರಷ್ಟು ಮಂದಿ ಅಭಿವೃದ್ಧಿ ನೋಡಿ ಮತ ನೀಡುತ್ತಾರೆ: ಪ್ರೀತಂ ಗೌಡ
“ಕ್ಷೇತ್ರದ ಜನತೆ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿ ಉಳಿದ ಕೆಲಸಗಳನ್ನು ಪೂರೈಸಲು ಅವಕಾಶ ಕೊಟ್ಟು, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಸಹಕರಿಸಿ” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸುಭಾನ್, ಮುಖಂಡರಾದ ತಜ್ಮಲ್ ಪಾಷ, ಸಿ.ಎಚ್.ಲೋಕೇಗೌಡ, ಹಗರೆ ದಿಲೀಪ್, ಶ್ರೀನಿಧಿ, ಈಶ್ವರಪ್ರಸಾದ್, ಸಂಗಮ್, ಅದ್ದೂರಿ ಕುಮಾರ್, ಭಾರತಿ ಅರುಣ್, ಲತಾಮಂಜೇಶ್ವರಿ, ಅಬ್ದುಲ್ ಖಾದರ್, ಸತೀಶ್, ನಾಗೇಶ್ ಯಾದವ್, ಪುರಸಭಾ ಸದಸ್ಯರಾದ ಜಗದೀಶ್, ಪುಟ್ಟಸ್ವಾಮಿ ಇದ್ದರು.